ಹರಿಹರ: ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಲೋಕ ಅದಾಲತ್ ಅತ್ಯತ್ತುಮ ವೇದಿಕೆಯಾಗಿದೆ. ವಕೀಲರು ಹಾಗೂ ಕಕ್ಷಿದಾರರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಾರದಾದೇವಿ ಸಲಹೆ ನೀಡಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಗುರುವಾರ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ಕೆ. ಸಿದ್ಧರಾಜುರವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಲೋಕ ಅದಾಲತ್ನಲ್ಲಿ ಪ್ರಕರಣ ಪರಿಹರಿಸಿಕೊಂಡರೆ ಕಕ್ಷಿದಾರರಿಗೆ ಸಮಯ, ಹಣ ಹಾಗೂ ಎದುರಾಳಿಯೊಂದಿಗೆ ಪ್ರೀತಿ ವಿಶ್ವಾಸವೂ ಉಳಿಯುತ್ತದೆ. ಶೀಘ್ರ ನ್ಯಾಯ ನಿರ್ಣಯದ ಜತೆಗೆ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದೆ ಎಂದರು.
ಕೋವಿಡ್ ಕಾರಣದಿಂದ ಲೋಕ ಅದಾಲತ್ ಪರಿಣಾಮಕಾರಿಯಾಗಿ ನಡೆಸಲಾಗಿಲ್ಲ. ಇಲಾಖೆಯಿಂದ ಆದೇಶ ಬಂದಲ್ಲಿ ಮತ್ತೆ ನಿಯಮಿತವಾಗಿ ಅದಾಲತ್ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ಶೀಘ್ರ ನ್ಯಾಯ ನಿರ್ಣಯಕ್ಕಾಗಿ ನ್ಯಾಯಾಂಗ ಇಲಾಖೆ ಹಮ್ಮಿಕೊಳ್ಳುವ ಲೋಕ ಅದಾಲತ್ ಸೇರಿ ಇತರೆ ಉಪಕ್ರಮಗಳಿಗೆ ವಕೀಲರ ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ. ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ನ್ಯಾಯಾಧೀಶ ಎನ್.ಕೆ. ಸಿದ್ದರಾಜು ಅವರಿಗೆ ಶುಭ ಕೋರಿ ಬೀಳ್ಕೊಡಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಯಶವಂತ್ ಕುಮಾರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹದೇವ್ ಕನ್ನಹಟ್ಟಿ, ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಚ್. ಲಿಂಗರಾಜ್, ವಕೀಲ ಬಿ. ಹಾಲಪ್ಪ ಹಾಗೂ ಇದ್ದರು.