ಹರಿಹರ: ವಿವಿಧ ವಾಹನಗಳ ಎಚ್ಎಸ್ಆರ್ಪಿ (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಅಳವಡಿಕೆ ಶುಲ್ಕದಲ್ಲಿ ಶೇ 75ರಷ್ಟು ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ್ ಶಶಿಧರಯ್ಯ ಅವರ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಶನಿವಾರ ಮನವಿ ನೀಡಿದರು.
ಬಡತನ ರೇಖೆಯಡಿ ಬರುವ ಕುಟುಂಬದವರೂ ಕೂಡ ಈಗ ದ್ವಿಚಕ್ರವಾಹನವನ್ನು ಹೊಂದಿದ್ದಾರೆ. ಈಗ ನಿಗದಿ ಮಾಡಿರುವ ದರವು ಮಧ್ಯಮ ಹಾಗೂ ಬಡ ವರ್ಗದವರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಪದಾಧಿಕಾರಿಗಳು ಹೇಳಿದರು.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ವ್ಯಾಪಾರ, ವಹಿವಾಟು ತಗ್ಗಿದೆ. ದುಡಿಮೆಯೂ ಕಡಿಮೆಯಿದ್ದು ಜನರು ಸಂಕಷ್ಟದಲ್ಲಿದ್ದಾರೆ. ಎಚ್ಎಸ್ಆರ್ಪಿ ದುಬಾರಿ ಶುಲ್ಕ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವಿವರಿಸಿದರು.
ವಿಶ್ವ ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ನಾಗರಾಜ್ ಭಂಡಾರಿ, ಹರಿಹರ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಪ್ರವೀಣ್ ಜಿ.ವಿ., ಅಧ್ಯಕ್ಷ ರಾಹುಲ್ ಮೆಹರ್ವಾಡೆ, ಪದಾಧಿಕಾರಿಗಳಾದ ನಿಂಗರಾಜ್ ಡಿವಿಜಿ, ಗಣೇಶ್ ಐ.ಬಿ., ಉಮೇಶ್ ಎ.ವಿ., ಹರೀಶ್ ಇಂಡಿ, ಸಮೀರ್ ಕಚವಿ, ಕಿರಣ್ ಅಂಬ್ರದ್, ಗಣೇಶ್ ಎಂ. ಇದ್ದರು.