ದಾವಣಗೆರೆ: ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತಿರುವ ಪ್ರಕರಣಗಳಲ್ಲಿ ಬಹುತೇಕರು ಮೊದಲ ಕಂತಿನ ಬಿಲ್ ಪಡೆದು ಮನೆ ನಿರ್ಮಿಸದೇ ಇರುವುದು ಕಂಡು ಬಂದಿದೆ. ಮನೆ ನಿಜವಾಗಿಯೂ ಕಳೆದುಕೊಂಡಿದ್ದರೆ ಅವರು ನಿರ್ಮಿಸಲು ಮುಂದಾಗುತ್ತಿದ್ದರು. ಹಾಗಾಗಿ ನೈಜ ಪರಿಶೀಲನೆ ನಡೆಸಿ ಫಲಾನುಭವಿಗಳನ್ನು ಗುರುತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹೇಳಿದರು.
ಶನಿವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಹವಾಮಾನ ಹಾಗೂ ಕೋವಿಡ್ ಪರಿಸ್ಥಿತಿ ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೆಲ ಮನೆಗಳಲ್ಲಿ ಯಾರೂ ವಾಸವಿರುವುದಿಲ್ಲ. ಇಲ್ಲವೇ ಯಾರಾದರು ವಯಸ್ಸಾದವರೊಬ್ಬರು ವಾಸಿಸುತ್ತಿರುತ್ತಾರೆ. ನಿರುಪಯುಕ್ತವಾಗಿ ಬಿದ್ದಿರುವ ಮನೆಗಳನ್ನು ತೋರಿಸುವ ಮೂಲಕ ಒಂದೆರಡು ಕಂತಿನ ಹಣ ಪಡೆದುಕೊಳ್ಳುತ್ತಾರೆ. ವಾಸ ಇಲ್ಲದಿರುವ ಮನೆಗೇಕೆ ಪರಿಹಾರ ಕೊಡಬೇಕು ಎಂದು ಅವರು ಪ್ರಶ್ನಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ತಪಾಸಣೆ ನಡೆಸಬೇಕು. ಅಕ್ಕಪಕ್ಕದವರನ್ನು ವಿಚಾರಿಸಬೇಕು. ಆಗ ಸರಿಯಾದ ವಿವರ ದೊರಲಿದೆ ಎಂದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತಿದೆ. ಏಳು ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಶೇ 45ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆಎಂದುಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ಮಾಹಿತಿನೀಡಿದರು.
ಅಡಿಕೆ ಬೆಳೆಯ ಪ್ರದೇಶ ಹೆಚ್ಚುತ್ತಿದೆ. ತೋಟಗಾರಿಕೆ ಬೆಳೆಗಳ ಪ್ರದೇಶದ ವಿಸ್ತೀರ್ಣ ಒಟ್ಟು ಶೇ 20ರಷ್ಟು ಹೆಚ್ಚಾಗಿದೆ. ಡ್ರ್ಯಾಗನ್ ಪ್ರೂಟ್ ಬೆಳೆಗೂ ರೈತರು ಒಲವು ತೋರಿಸುತ್ತಿದ್ದಾರೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಈಗಾಗಲೇ ಪ್ರವೇಶಾತಿ ಆರಂಭವಾಗಿದ್ದು 2.30 ಲಕ್ಷ ವಿದ್ಯಾರ್ಥಿಗಳ ದಾಖಲಾತಿ ಆಗಿದೆ. 190 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಅವರಿಗೆ 10 ಸಾವಿರ ಸಂಬಳ ನೀಡಲಾಗುತ್ತಿದೆ ಎಂದು ಡಿಡಿಪಿಐ ತಿಪ್ಪೇಶಪ್ಪ ವಿವರ ನೀಡಿದರು.
ಜೂನ್ ತಿಂಗಳಲ್ಲಿ 4,271 ಕೋವಿಡ್ ಪರೀಕ್ಷೆ ಮಾಡಲಾಗಿದೆ. 5 ಸಕ್ರಿಯ ಕೋವಿಡ್ ಪ್ರಕರಣಗಳು ಕಂಡು ಬಂದಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಹೇಳಿದರು.
ಭತ್ತದ ಗದ್ದೆಗಳಿರುವ ಕಡೆಗಳಲ್ಲಿ ವೈರಲ್ ಜ್ವರದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಜೋಡಿಕಟ್ಟೆ, ಮಾವಿನಕಟ್ಟೆ, ಕಡ್ಳೆಬಾಳು, ಅರಸಾಪುರ ಭಾಗಗಳಲ್ಲಿ ಚಿಕೂನ್ಗುನ್ಯ ಹೆಚ್ಚಾಗುತ್ತಿದೆ. ಕೆಮ್ಮು ನೆಗಡಿ ಅಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಸರ್ವೇಕ್ಷಣೆ ಹೆಚ್ಚಾಗಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ನಗರಾಭಿವೃದ್ಧಿ ಕೋಶದ ಅಧಿಕಾರಿ ನಜ್ಮಾ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ ಸುಂಕದ್. ಡಾ. ನಟರಾಜ್, ಡಾ.ಮುರಳೀಧರ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.