ದಾವಣಗೆರೆ: ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಹದಡಿ ಠಾಣಾ ವ್ಯಾಪ್ತಿಯ ಮತ್ತಿ ಗ್ರಾಮದ ಬೀರಪ್ಪ (40) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈಕೆಯ ಪತ್ನಿ ಸಾವಿತ್ರಮ್ಮ (32) ಕೊಲೆಯಾದವರು.
ಪತ್ನಿಯ ಶೀಲ ಶಂಕಿಸಿ ಬೀರಪ್ಪ ಆಗಾಗ್ಗೆ ಜಗಳ ಮಾಡುತ್ತಿದ್ದ. ಇದರಿಂದ ಬೇಸತ್ತ ಸಾವಿತ್ರಮ್ಮ ತವರು ಮನೆಗೆ ಸೇರಿಕೊಂಡಿದ್ದರು. ಮಗಳ ಆಧಾರ್ ಕಾರ್ಡ್ ತರಲೆಂದು ಮತ್ತಿ ಗ್ರಾಮಕ್ಕೆ ಬಂದಾಗ ಗಂಡ–ಹೆಂಡತಿಯವರ ನಡುವೆ ಜಗಳ ನಡೆದಿದೆ.
2018ರ ಸೆಪ್ಟೆಂಬರ್ 14ರಂದು ಗಲಾಟೆ ತೆಗೆದು ಹೆಂಡತಿಯನ್ನು ಬಲವಾದ ಆಯುಧದಿಂದ ಹೊಡೆದಾಗ ತೀವ್ರ ರಕ್ತಸ್ರಾವವಾಗಿ ಸಾವಿತ್ರಮ್ಮ ಮೃತಪಟ್ಟಿದ್ದರು. ಅಂದಿನ ಸಿಪಿಐ ಎಚ್. ಗುರುಬಸವರಾಜ್ ಅವರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಮಂಗಳವಾರ ವಿಚಾರಣೆ ಆಲಿಸಿದ ನ್ಯಾಯಾಧೀಶರಾದ ಕೆಂಗಬಾಲಯ್ಯ ಅವರು ಆರೋಪಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ₹20 ಸಾವಿರ ದಂಡ ವಿಧಿಸಿದ್ದಾರೆ. ದಂಡ ಕೊಡಲು ತಪ್ಪಿದ್ದಲ್ಲಿ ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.