ದೊಡ್ಡ ಹಬ್ಬಗಳಾದ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಚೆಂಡು ಹೂವಿಗೆ ಹೆಚ್ಚು ಬೇಡಿಕೆ ಇರುವುದರಿಂದ ಸರಿಯಾಗಿ ಈ ತಿಂಗಳುಗಳಲ್ಲಿ ಕೊಯಿಲಿಗೆ ಬರುವಂತೆ ಸಸಿಗಳನ್ನು ನಾಟಿ ಮಾಡುತ್ತೇವೆ. ಈಕಾಲದಲ್ಲಿ ಮುಂಗಾರು ಮಳೆಯ ಕಾಲ ಮುಗಿದಿದ್ದು, ಈಹೂವಿನ ಬೆಳೆಗೆ ಉತ್ತಮ ವಾತಾವರಣ ಇರುತ್ತದೆ. ಆದರೆ, ಈ ವರ್ಷದ ಅಕ್ಟೋಬರ್ ಕೊನೆಯವಾರ ಮತ್ತು ನವೆಂಬರ್ ಮೊದಲ ವಾರ ಬಿದ್ದ ಮಳೆಗೆ ಗಿಡಗಳು ಕೊಳೆತು ಹೂಗಳು ಕಪ್ಪು ಬಣ್ಣಕ್ಕೆ ತಿರುಗಿ ಫಸಲು ನೆಲ ಕಚ್ಚಿದೆ. ದೀಪಾವಳಿಗೆ ಚೆಂಡುಹೂವಿನ ಅಲಂಕಾರಕ್ಕೆ ಹೆಚ್ಚು ಹೂಗಳನ್ನು ಬಳಸುವುದರಿಂದ ಉತ್ತಮ ಆದಾಯ ಸಿಗಬಹುದು ಎಂದು ಭಾವಿಸಿದ್ದ ನಮಗೆ ಬೆಳೆ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ರೈತ ಮಹಮದ್ ಅಲಿ.