ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ: ಆರೋಪಿಗಳು ಪರಾರಿ

Last Updated 12 ಆಗಸ್ಟ್ 2021, 5:03 IST
ಅಕ್ಷರ ಗಾತ್ರ

ದಾವಣಗೆರೆ: ಹಳೇ ದಾವಣಗೆರೆಯ ಬಸವರಾಜಪೇಟೆಯಲ್ಲಿ ಬುಧವಾರ ರಾತ್ರಿ ಕಾಂಗ್ರೆಸ್‌ ಮುಖಂಡ, ರಿಯಲ್‌ ಎಸ್ಟೇಟ್‌ ಉದ್ಯಮಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.

ಬಸವರಾಜಪೇಟೆಯ ಸೀಮೆಣ್ಣೆ ಪರಮೇಶ್ (45) ಕೊಲೆಯಾದವರು. ತನ್ನ ಮನೆಯ ಪಕ್ಕದ ಬೀದಿ ಹುಬ್ಬಳ್ಳಿ ಚೌಡಪ್ಪ ಗಲ್ಲಿಯಲ್ಲಿರುವ ಪರಿಚಿತರ ಮನೆಗೆ ಹೋಗಿ ಬರುತ್ತಿದ್ದಾಗ ಆಟೋದಲ್ಲಿ ಬಂದ ಮೂರ್ನಾಲ್ಕು ಮಂದಿ ಪರಮೇಶ್‌ ಅವರಿಗೆ ಹೊಡೆದಿದ್ದಾರೆ. ಕೆಳಗೆ ಬಿದ್ದ ಪರಮೇಶ್‌ ಮೇಲೆ ಪಕ್ಕದಲ್ಲಿದ್ದ ಕಲ್ಲು ಹೊತ್ತು ಹಾಕಿದ್ದಾರೆ. ಪರಮೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳು ತಾವು ಬಂದ ಆಟೋದಲ್ಲಿ ಪರಾರಿಯಾಗಿದ್ದಾರೆ.

ಪರಮೇಶ್‌ ಅವರು ಜನಲೋಕಶಕ್ತಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದ ಅವರು, ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದರು. ಹಿಂದೆ ಸೀಮೆಎಣ್ಣೆ ವ್ಯಾಪಾರ ನಡೆಸುತ್ತಿದ್ದರು. ಬಳಿಕ ಕ್ಲಬ್‌, ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ದರು. ಹಳೇ ವೈಷಮ್ಯವೇ ಕೊಲೆಗೆ ಕಾರಣ ಇರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಎಸ್‌ಪಿ ಸಿ.ಬಿ. ರಿಷ್ಯಂತ್‌, ಎಎಸ್‌ಪಿ ರಾಜೀವ್‌ ಎಂ., ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪತ್ನಿ, ಮೂವರು ಮಕ್ಕಳು, ಮೂವರು ಸಹೋದರಿಯರು, ಸಂಬಂಧಿಕರ ರೋದನ ಮುಗಿಲುಮುಟ್ಟಿತು.

ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ದಾವಣಗೆರೆ: ತಾಲ್ಲೂಕಿನ ಕುರ್ಕಿ ನಾಲೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಕುರ್ಕಿ ರೇವಣಸಿದ್ಧಪ್ಪ ಅವರ ಅಡಿಕೆ ತೋಟದ ಬಳಿಕ ಭದ್ರಾನಾಲೆಯಲ್ಲಿ ಗಿಡಗಂಟಿಗಳ ಮಧ್ಯೆ ಬೋರಲಾಗಿ ಬಿದ್ದಿದ್ದ ಶವ ನೀರಗಂಟಿ ರುದ್ರಪ್ಪ ಅವರಿಗೆ ಕಂಡಿತ್ತು. ಅವರು ಹದಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ನೋಡಿದಾಗ ಹೊಟ್ಟೆ ಭಾಗಕ್ಕೆ ಆಯುಧದಿಂದ ತಿವಿದಿರುವ, ಕುತ್ತಿಗೆಯನ್ನು ಬಟ್ಟೆಯಿಂದ ಬಿಗಿದಿರುವ ಸ್ಥಿತಿಯಲ್ಲಿತ್ತು. 10–12 ದಿನಗಳ ಹಿಂದೆ ಯಾರೋ ಕೊಲೆ ಮಾಡಿ ನಾಲೆಗೆ ಬಿಸಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಹದಡಿ ಪಿಎಸ್‌ಐ ಪ್ರಸಾದ್‌ ಪಿ. ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT