ಹರಪನಹಳ್ಳಿ: ಜುಲೈ 15ರಂದು ನಡೆದಿದ್ದ ಆರ್ಟಿಐ ಕಾರ್ಯಕರ್ತ ಟಿ. ಶ್ರೀಧರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 3 ಜನರನ್ನು ಬಂಧಿಸಿದ್ದು, ಇದುವರೆಗೆ ಒಟ್ಟು 9 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಪಟ್ಟಣದ ಠಾಣೆಗೆ ಶನಿವಾರ ಭೇಟಿ ನೀಡಿ ಬಂಧಿತ ಮೂರು ಜನ ಆರೋಪಿಗಳ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶ್ರೀಧರ್ ಅವರ ಹತ್ಯೆ ನಡೆದ ಎರಡು ದಿನಗಳಲ್ಲಿ 6 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮಂಜುನಾಥ್, ರಾಯದುರ್ಗ ಹಾಲೇಶ್ ಮತ್ತು ರಾಯದುರ್ಗ ಬಸವರಾಜ್ ಎಂಬವವರನ್ನು ಶನಿವಾರ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದರು.
ಬೆದರಿಸುವ ಉದ್ದೇಶಕ್ಕೆ ಹಲ್ಲೆ ಮಾಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಶ್ರೀಧರ್ ಮೃತಪಟ್ಟಿರುವುದು ಆರೋಪಿಗಳ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಪೊಲೀಸ್ ಉಪ ಅಧೀಕ್ಷಕ ವಿ.ಎಸ್. ಹಾಲಮೂರ್ತಿ ರಾವ್, ಸಿಪಿಐ ನಾಗರಾಜ್ ಎಂ. ಕಮ್ಮಾರ್, ಪಿಎಸ್ಐ ಪ್ರಕಾಶ್ ಇದ್ದರು.