ಮಲೇಬೆನ್ನೂರು: ರೈತರಿಗೆ ನೀರಾವರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಲು ಕಾಡಾ ಹಾಗೂ ನೀರಾವರಿ ನಿಗಮವನ್ನು ವಿಲೀನಗೊಳಿಸಬೇಕು ಎಂದು ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಶನಿವಾರ ಸರ್ಕಾರವನ್ನು ಆಗ್ರಹಿಸಿದರು.
ಮಲೇಬೆನ್ನೂರು ಶಾಖಾನಾಲೆ ವ್ಯಾಪ್ತಿಯಲ್ಲಿ ಹಾಳಾಗಿರುವ ಭದ್ರಾ ನಾಲೆ ಹಾಗೂ ಸೇವಾ ರಸ್ತೆ ವೀಕ್ಷಿಸಿ ಅವರು ಮಾತನಾಡಿದರು.
ಎರಡೂ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಇದ್ದು, ಕಾಡಾ ಅಧಕ್ಷರು ಏನೂ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ನಾಲೆ, ಪಿಕಪ್ ಹಾಗೂ ರಸ್ತೆಗಳು ದುರಸ್ತಿ ಕಾಣದೆ ರೈತರಿಗೆ ತೊಂದರೆಯಾಗುತ್ತಿದೆ. ಕಾಡಾ ಅಧ್ಯಕ್ಷರಿಗೆ ಎರಡೂ ಇಲಾಖೆಗಳ ಸಂಪೂರ್ಣ ಅಧಿಕಾರ ನೀಡಿದರೆ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಬಹುದು ಎಂದರು.
10ನೇ ಉಪನಾಲೆ ಬಳಿಯ ಭದ್ರಾ ಮುಖ್ಯನಾಲೆಯ ಸೋಪಾನ ಕೊಚ್ಚಿಹೋಗಿದ್ದು, ನಾಲೆ ರಸ್ತೆ ನೀರಿನ ರಭಸಕ್ಕೆ ಹಾಳಾಗಿರುವುದನ್ನು ವೀಕ್ಷಿಸಿದರು. ಕೊಕ್ಕನೂರು, ಹೊಳೆಸಿರಿಗೆರೆ ಪಿಕಪ್ಗಳಿಗೆ ಭೇಟಿ ನೀಡಿದಾಗ, ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ನೀರು ಕೊನೆಯ ಭಾಗಕ್ಕೆ ತಲುಪುತ್ತಿಲ್ಲ. ಕೂಡಲೇ ಕಾಲುವೆ ಹೂಳು ತೆಗೆದು ಕಾಂಕ್ರೀಟ್ ಲೈನಿಂಗ್ ಮಾಡಿಸುವಂತೆ ಹಾಗೂ ರಸ್ತೆ ನಿರ್ಮಿಸಲು ರೈತರು ಕೋರಿದರು.
ರೈತರ ಮನವಿ ಆಲಿಸಿದ ಕಾಡಾ ಅಧ್ಯಕ್ಷೆ, ‘ಪಿಕಪ್ ದುರಸ್ತಿ, ರಸ್ತೆ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು’ ಎಂದರು.
ಎಇಇ ಸಂತೋಷ್, ರೈತರಾದ ಯರೆಸೀಮೆ ಈರಣ್ಣ ಹೊಳೆಸಿರಿಗೆರೆ ಎಂ. ಫಾಲಾಕ್ಷಪ್ಪ, ಕೆ. ರಾಜಪ್ಪ, ಎಂ. ಪ್ರಭು, ಬಿ. ಪ್ರಭು, ಶಿವಶಂಕರ್ ಅವರೂ ಈ ಸಂದರ್ಭದಲ್ಲಿ ಇದ್ದರು.