ದಾವಣಗೆರೆ: ಇಲ್ಲಿನ ಅರಸಾಪುರ ಬಳಿಯ ಯುವಕನೊಂದಿಗೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬಾಲಕಿಯ ಮದುವೆಯನ್ನು ಮಕ್ಕಳ ಸಹಾಯವಾಣಿ ಕೊಲ್ಯಾಬ್ (ಡಾನ್ ಬಾಸ್ಕೊ), ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಪೊಲೀಸರ ತಂಡ ಬುಧವಾರ ತಡೆದಿದೆ.
ದೇವಸ್ಥಾನದಲ್ಲಿ 24 ವರ್ಷದ ಯುವಕನೊಂದಿಗೆ 17 ವರ್ಷ 10 ತಿಂಗಳ ಬಾಲಕಿಯ ಮದುವೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಅಧಿಕಾರಿಗಳ ತಂಡವು ಮದುವೆ ನಡೆಯಲಿದ್ದ ಸ್ಥಳಕ್ಕೆ ಭೇಟಿ ನೀಡಿತು. ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹಾಗೂ ಬಾಲ್ಯ ವಿವಾಹ ಮಾಡಿದರೆ ಶಿಕ್ಷೆ ವಿಧಿಸುವ ಕಾನೂನು ಬಗ್ಗೆ ಅಧಿಕಾರಿಗಳು ಹೆತ್ತವರಿಗೆ ತಿಳಿಸಿದರು. ಬಾಲಕಿಯನ್ನು ವಶಕ್ಕೆ ಪಡೆದರು. ಹೆಚ್ಚಿನ ಪೋಷಣೆ ಹಾಗೂ ರಕ್ಷಣೆಗಾಗಿ ಶುಭೋದಯ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು.
ಮಕ್ಕಳ ಸಹಾಯವಾಣಿ ಸಂಯೋಜಕ ಟಿ.ಎಂ.ಕೊಟ್ರೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ.ರಾಮ ನಾಯ್ಕ್, ಸಹಾಯವಾಣಿ ಕಾರ್ಯಕರ್ತೆ ವಿ.ಮಂಜುಳಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಧರಣಿಕುಮಾರ್, ಅಂಗನವಾಡಿ ಕಾರ್ಯಕರ್ತೆಯರಾದ ಹೇಮಾವತಿ, ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಪ್ರಕಾಶ, ಹನುಮಂತಪ್ಪ ಭಾಗವಹಿಸಿದ್ದರು.