ಗಡೆಕಟ್ಟೆ (ನ್ಯಾಮತಿ): ತಾಲ್ಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದ ಚಿರತೆ ಪಕ್ಕದ ಕುಂಕುವ, ಗಡೆಕಟ್ಟೆ ಗ್ರಾಮದ ಹೊರಭಾಗದಲ್ಲಿ ಸಂಚರಿಸಿರುವ ಹೆಜ್ಜೆ ಗುರುತುಗಳು ಕಂಡುಬಂದ ಕಾರಣ ಅರಣ್ಯ ಇಲಾಖೆಯವರು ಶನಿವಾರ ಬೋನನ್ನು ಅಳವಡಿಸಿದರು.
ನಾಲ್ಕು ದಿನಗಳಿಂದ ಚಿರತೆ ಸೆರೆಗೆ ಹಗಲು-ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸುತ್ತಿದ್ದು, ಚಿರತೆ ಸಿಗದೆ ಇರುವುದು ಆತಂಕ ಉಂಟುಮಾಡಿದೆ. ಕುಂಕುವ ಮತ್ತು ಗಡೆಕಟ್ಟೆ ಗ್ರಾಮದಲ್ಲಿ ಗಂಡು ಚಿರತೆ ಸಂಚರಿಸಿದ ಹೆಜ್ಜೆ ಗುರುತುಗಳು ಪತ್ತೆಯಾದ ಕಾರಣ 2 ಬೋನುಗಳನ್ನು ಗಡೆಕಟ್ಟೆ ಹೊರವಲಯದಲ್ಲಿ ಇರಿಸಲಾಗಿದೆ. ಫಲವನಹಳ್ಳಿಯಲ್ಲಿ 3 ಮತ್ತು ಮಾದೇನಹಳ್ಳಿ ಭಾಗದಲ್ಲಿ 1 ಬೋನನ್ನು ಇಡಲಾಗಿದೆ ಎಂದು ಹೊನ್ನಾಳಿ ಆರ್ಎಫ್ಒ ಕೆ.ಆರ್. ಚೇತನ ಮಾಹಿತಿ ನೀಡಿದರು.
ಚಿರತೆ ಸಂಚಾರದ ಬಗ್ಗೆ ದೊಡ್ಡೇರಿ, ಕೂಗನಹಳ್ಳಿ, ಗಡೆಕಟ್ಟೆ, ಕುಂಕುವ ಗ್ರಾಮಗಳಲ್ಲಿ ಟಾಂಟಾಂ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಪುಕಾರಗಳನ್ನು ಹಬ್ಬಿಸದೆ ಚಿರತೆ ಸೆರೆಗೆ ಸಹಕರಿಸಬೇಕು. ಯರಗನಾಳ್ ಗ್ರಾಮದಲ್ಲಿ ಕತ್ತೆ ಕಿರುಬ ಕಂಡುಬಂದಿದ್ದು, ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಮೋಹನಕುಮಾರ, ಬರ್ಕತ್ ಅಲಿ, ಅರಣ್ಯ ರಕ್ಷಕ ಕೃಷ್ಣಮೂರ್ತಿ, ಲಿಂಗರಾಜ, ಚಂದ್ರಪ್ಪ, ಬಸವರಾಜಪ್ಪ, ಅಂಜಲಿ, ಆಶಾ ಅವರೂ ಇದ್ದರು.