ಕೆಂಚಿಕೊಪ್ಪ (ನ್ಯಾಮತಿ): ವಿವಿಧ ಧಾರ್ಮಿಕ ಆಚರಣೆಗಳಿಂದ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ನೆಲಸುತ್ತದೆ ಎಂದು ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗ್ರಾಮದಲ್ಲಿ ಮಂಗಳವಾರ ನಡೆದ ರಾಮದೇವರ ಮತ್ತು ಆಂಜನೇಯಸ್ವಾಮಿ ಮಹಾರಥೋತ್ಸವಕ್ಕೆ ಗ್ರಾಮದ ಮೃತ್ಯುಂಜಯಸ್ವಾಮಿ ಅವರೊಡನೆ ಚಾಲನೆ ನೀಡಿ ಅವರು ಮಾತನಾಡಿದರು.
ಹಬ್ಬ, ಜಾತ್ರೆ, ರಥೋತ್ಸವ ಆಚರಣೆ ಸಂದರ್ಭದಲ್ಲಿ ಕುಟುಂಬದವರು, ಸಂಬಂಧಿಕರು ಒಂದೆಡೆ ಸೇರುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಆಲಂಕೃತಗೊಂಡ ರಥದಲ್ಲಿ ರಾಮದೇವರ ಮತ್ತು ಆಂಜನೇಯಸ್ವಾಮಿಯನ್ನು ನೂರಾರು ಭಕ್ತರ ಜಯಘೋಷದೊಂದಿಗೆ ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಎಳೆಯಲಾಯಿತು.
ಹರಕೆ ಹೊತ್ತ ಭಕ್ತರು ರಥಕ್ಕೆ ಮಂಡಕ್ಕಿ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಮೆರೆದರು. ಗ್ರಾಮ ದೇವತೆಗಳಾದ ಮಾಯವ್ವ, ಮರಿಯಮ್ಮ, ಹುತ್ತೇಶ್ವರ, ಮಹೇಶ್ವರಸ್ವಾಮಿ, ಬಸವೇಶ್ವರ ಹಾಗೂ ಮಾರಿಕೊಪ್ಪದ ಹಳದಮ್ಮದೇವಿ ರಥೋತ್ಸವದಲ್ಲಿ ಪಾಲ್ಗೊಂಡು ಮೆರಗು ತಂದವು.
ದೇವಸ್ಥಾನದ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಬೇಟೆಮರ ತರುವುದು, ಹರಿಸೇವೆ (ಮಣೇವು) ನಡೆಯಿತು.
ಗ್ರಾಮದ ಹಿರಿಯರಾದ ಮೃತ್ಯುಂಜಯಸ್ವಾಮಿ, ಎಸ್.ಎಚ್.ರುದ್ರೇಶ, ಎಚ್.ರಾಜಪ್ಪ, ಎಸ್.ಎಚ್.ಆನಂತಮೂರ್ತಿ, ಎಚ್.ಚನ್ನೇಶಪ್ಪ, ಗ್ರಾಮಸ್ಥರು, ದೇವಸ್ಥಾನ ಸಮಿತಿಯವರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.