ದಾವಣಗೆರೆ: ನಗರದ ಹೊಂಡದ ವೃತ್ತದಲ್ಲಿರುವ ಕಲ್ಯಾಣಿಯಲ್ಲಿ ಶುಕ್ರವಾರ ಬೆಳಿಗ್ಗೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುವ ಬೂದಾಳು ರಸ್ತೆ ನಿವಾಸಿ ಅಂಜಿನಪ್ಪ ಅವರ ಪುತ್ರ ಶಂಕರ್ (17) ಮೃತ ವಿದ್ಯಾರ್ಥಿ. ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.
ನೀರಿನ ಆಳ ಜಾಸ್ತಿಯಿದ್ದು, ಈಜಲು ಆಗದೇ ಆಕಸ್ಮಿಕವಾಗಿ ಮುಳುಗಿರಬಹುದು. ಅದೇ ಸಂದರ್ಭದಲ್ಲಿ 15ಕ್ಕೂ ಹೆಚ್ಚು ಮಂದಿ ಅಲ್ಲಿ ಈಜುತ್ತಿದ್ದರಾದರೂ ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.