ದಾವಣಗೆರೆ:ಈ ಹಿಂದೆ ವೈದ್ಯಕೀಯ ಎಂಬುದು ಸೇವೆಯ ಭಾಗವಾಗಿತ್ತು. ಆದರೆ ಇಂದು ಅದು ವ್ಯಾಪಾರೀಕರಣದ ವಿವಿಧ ಮುಖಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕದಾದಾಪೀರ್ ನವಿಲೇಹಾಳ್ ತಿಳಿಸಿದರು.
ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗದಿಂದ ನಗರದ ಸಿದ್ಧಗಂಗಾ ಶಾಲೆಯ ಆವರಣದಲ್ಲಿಪತ್ರಕರ್ತ ವಿ. ಹನುಮಂತಪ್ಪ ರಚಿಸಿರುವ ‘ನನ್ನ ಆರೋಗ್ಯ-ನನ್ನ ಸಂಪತ್ತು’ ಕೃತಿ ಕುರಿತು ಅವರು ಮಾತನಾಡಿದರು.
‘ಆರೋಗ್ಯವನ್ನು ಕಳೆದುಕೊಂಡರೆ ಎಲ್ಲವನ್ನು ಕಳೆದುಕೊಂಡಂತೆ. ವೈಯಕ್ತಿಕ ಆರೋಗ್ಯವು ದೇಶದ ಆರೋಗ್ಯವೂ ಹೌದು. ಕೇಂದ್ರ ಸರ್ಕಾರ ರಕ್ಷಣಾ ಕ್ಷೇತ್ರವನ್ನು ಹೊರತುಪಡಿಸಿದರೆ ಆರೋಗ್ಯ ಕ್ಷೇತ್ರಕ್ಕಾಗಿ ಹೆಚ್ಚಿನ ಬಜೆಟ್ ಅನ್ನು ತೆಗೆದಿರಿಸಿ ಆರೋಗ್ಯ ಸುಧಾರಣೆಯ ಯೋಜನೆಗಳನ್ನು ಜಾರಿಪಡಿಸುತ್ತಿದೆ’ ಎಂದರು.
‘ಆರೋಗ್ಯದ ಬಗೆಗಿನ ಕಾಳಜಿಯು ಪುರಾತನ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದು, ಅದು ಭಾರತೀಯ ಸಂಸ್ಕೃತಿಯ ಒಂದು ಭಾಗವೆನಿಸಿದೆ. ಸುಶ್ರುತ, ಧನ್ವಂತ್ರಿ, ಚರಕರಂತಹ ವಿದ್ವಾಂಸರ ಕೊಡುಗೆಯನ್ನು ಚರಿತ್ರೆಯಲ್ಲಿ ಸ್ಮರಿಸುವಂತಾಗಿದೆ’ ಎಂದರು.
ಪುಸ್ತಕ ಲೋಕಾರ್ಪಣೆಗೊಳಿಸಿದ ಲೇಖಕ ಎನ್.ಟಿ.ಯರ್ರಿಸ್ವಾಮಿ, ‘ಈಗ ಆರೋಗ್ಯದ ಬಗ್ಗೆ ಕಾಳಜಿ ಸಾರ್ವತ್ರಿಕವಾಗಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರಾದರೂ ಆರೋಗ್ಯದ ಜಾಗೃತಿಗೆ ಒತ್ತುಕೊಡುವ ಲೇಖನಗಳ ಸಂಗ್ರಹದ ಪುಸ್ತಕವನ್ನು ಪ್ರಕಟಿಸಿರುವ ಲೇಖಕರ ಶ್ರಮ ಶ್ಲಾಘನೀಯ’ ಎಂದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ,ಬಳಗದ ಉಪಾಧ್ಯಕ್ಷ ಡಾ.ಈಶ್ವರ ಶರ್ಮ,ಪ್ರಧಾನ ಕಾರ್ಯದರ್ಶಿ ಸಿ.ಕೆ.ಆನಂದ ತೀರ್ಥಾಚಾರ್,ಗಿರಿಶೈಲ ಪ್ರಕಾಶನದ ಟಿ.ಎಸ್.ಶೈಲಜಾ ಇದ್ದರು. ಬಳಗದ ಸಂಚಾಲಕಸಾಲಿಗ್ರಾಮ ಗಣೇಶ ಶೆಣೈ ಕಾರ್ಯಕ್ರಮ ನಿರೂಪಿಸಿದರು.