ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿ ಸುಕ್ಷೇತ್ರದಲ್ಲಿ ಶನಿವಾರ ತುಂಗಭದ್ರಾ ನದಿ ಸ್ನಾನಕ್ಕೆ ಇಳಿದಿದ್ದ ವ್ಯಕ್ತಿಯೊಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಅಗ್ನಿಶಾಮಕದಳ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಚನ್ನಗಿರಿ ತಾಲ್ಲೂಕಿನ ರಾಜಗೊಂಡನಹಳ್ಳಿ ಗ್ರಾಮದ ವ್ಯಕ್ತಿ ಪರಮೇಶ್ವರ ನಾಯ್ಕ್ (35) ಎಂಬವರು ನದಿಗೆ ಅಳವಡಿಸಿದ್ದ ಬ್ಯಾರಿಕೇಡ್ ತೆಗೆದು ಸ್ನಾನ ಮಾಡಲು ಹೋದಾಗ ದುರ್ಘಟನೆ ಸಂಭವಿಸಿದೆ.
ಇವರು ತಮ್ಮೊಂದಿಗೆ ಇದ್ದ ತಾಯಿ, ತಮ್ಮ ಹಾಗೂ ಅಳಿಯನ ಯಾಮಾರಿಸಿ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಪ್ರವಾಹ ಪರಿಸ್ಥಿತಿ ಅವಲೋಕಿಸಲು ಎಸಿ ದುರ್ಗಾಶ್ರೀ, ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ಥ, ಪಿಎಸ್ಐ ರವಿಕುಮಾರ್, ನೋಡಲ್ ಅಧಿಕಾರಿ ಡಾ. ನಾರನಗೌಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ವಿಷಯ ತಿಳಿದ ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಾರ್ಯದರ್ಶಿ ಸುರೇಶ್, ಗ್ರಾಮಸ್ಥರೂ ಘಟನಾ ಸ್ಥಳಕ್ಕೆ ಬಂದರು. ಅಗ್ನಿಶಾಮಕ ತುರ್ತು ಸೇವಾ ಸಿಬ್ಬಂದಿ ಹಾಗೂ ನುರಿತ ಈಜುಗಾರರು ನದಿಯಲ್ಲಿ ಮುಳುಗಿರುವ ವ್ಯಕ್ತಿಯ ಶೋಧ ಕಾರ್ಯವನ್ನು ಸಂಜೆಯವರೆಗೂ ನಡೆಸಿದರು. ಪತ್ತೆಯಾಗದ ಕಾರಣ ಪತ್ತೆ ಕಾರ್ಯ ಸ್ಥಗಿತಗೊಳಿಸಲಾಯಿತು ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.