ದಾವಣಗೆರೆ: ಆರ್ಸಿಎಚ್ (ಆಶಾನಿಧಿ) ಪೋರ್ಟಲ್ ಮೂಲಕ ನೀಡುತ್ತಿರುವ ಪ್ರೋತ್ಸಾಹಧನ ರದ್ದುಪಡಿಸಿ, ದಿನಚರಿ ಕೆಲಸಗಳ ಜತೆಗೆ ಇತರ ನಿಗದಿತ ಚಟುವಟಿಕೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ಒಟ್ಟುಗೂಡಿಸಿ ಗೌರವಧನ ನಿಗದಿ ಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಮುಂಭಾಗ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
‘ಆರ್ಸಿಎಚ್ ಪೋರ್ಟಲ್ನ ಅಗಣಿತ ಸಮಸ್ಯೆಗಳ ಕಾರಣದಿಂದ ಆಶಾಗಳು ಮಾಡಿದ ಕಾರ್ಯಕ್ಕೆ ಹಣ ಬರುತ್ತಿಲ್ಲ. ಈ ಸಂಬಂಧ ಪುರಾವೆಗಳ ಸಹಿತ ಸರ್ಕಾರಕ್ಕೆ ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಭೆಯಲ್ಲಿ ನೀಡಿರುವ ಭರವಸೆಯಂತೆ ಡಿಸೆಂಬರ್ ತಿಂಗಳ ಬಳಿಕ ಆರ್ಸಿಎಚ್ ಪೋರ್ಟಲ್ನಿಂದ ಪ್ರೋತ್ಸಾಹ ಧನ ಪಾವತಿ ಮಾಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
‘ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ₹5,000 ನಿಗದಿತ ದಿನಚರಿ ಚಟುವಟಿಕೆಯ ನಿಶ್ಚಿತ ಗೌರವಧನ ₹2 ಸಾವಿರ ಮತ್ತು ಆಶಾ ನಿಧಿಯ ಮೂಲಕ ಪಡೆಯುವ ವಿವಿಧ ಚಟುವಟಿಕೆಯ ಪ್ರೋತ್ಸಾಹಧನ ₹5 ಸಾವಿರ ಸೇರಿಸಿ ತಿಂಗಳಿಗೆ ₹12 ಸಾವಿರ ಗೌರವಧನ ನಿಗದಿ ಮಾಡಿ ಪ್ರತಿ ತಿಂಗಳು ಪಾವತಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಮಂಜುನಾಥ್ ಕೈದಾಳೆ, ನಾಗವೇಣಿ, ಸುಮಾ ನಲ್ಲೂರು, ಲೀಲಾವತಿ, ಭಾರತಿ, ಗೀತಾ, ತಿಪ್ಪಮ್ಮ, ಲಲಿತಮ್ಮ ಹೆಬ್ಬಾಳು, ಅನಿತಾ ಶಿವಪುರ, ತಿಪ್ಪಮ್ಮ ನೀರ್ಥಡಿ ಇದ್ದರು.