ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರು ತಾಲ್ಲೂಕಿಗೆ 2.4 ಟಿಎಂಸಿ ಅಡಿ ನೀರು ಹರಿಸುವ ಸಂಬಂಧ ರಾಜ್ಯ ಸರ್ಕಾರ ಶೀಘ್ರ ಅಧಿಸೂಚನೆ ಹೊರಡಿಸಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶಪ್ಪ ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಯಡಿ ಜಗಳೂರು ತಾಲ್ಲೂಕಿಗೆ 2.4 ಟಿಎಂಸಿ ಅಡಿ ನೀರು ಹರಿಸುವ ಸಂಬಂಧ ತಜ್ಞರ ಅಂತಿಮ ವರದಿಯನ್ನು ಮುಖ್ಯಮಂತ್ರಿ ಅನುಮೋದಿಸಿದ್ದು, ಶೀಘ್ರ ಅಧಿಸೂಚನೆ ಹೊರಡಿಸಬೇಕು’ ಎಂದು ಆಗ್ರಹಿಸಿದರು.
ಜನಪ್ರತಿನಿಧಿಗಳು ಶೀಘ್ರ ತಾಲ್ಲೂಕಿನ 57 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿಕೆ ನೀಡುತ್ತಿದ್ದಾರೆ. ಅಧಿಸೂಚನೆ ಆಗದೆ ಈ ರೀತಿ ಗೊಂದಲ ಮೂಡಿಸುವುದನ್ನು ಬಿಡಬೇಕು ಎಂದು ಹೇಳಿದರು.
‘ತುಂಗಾದಿಂದ 17.4 ಟಿಎಂಸಿ ಅಡಿ ನೀರನ್ನು ಮಳೆಗಾಲದಲ್ಲಿ ಭದ್ರಾಗೆ ಹರಿಸುವ ಸಂಬಂಧ ಇದುವರೆಗೆ ಕ್ರಮ ಕೈಗೊಂಡಿಲ್ಲ. ಮಳೆಗಾಲ ಇದ್ದರೂ ಭದ್ರಾಗೆ ನೀರು ಹರಿದೇ ಇಲ್ಲ. ಅಲ್ಲದೇ ಭದ್ರಾದಲ್ಲಿನ 12.5 ಟಿಎಂಸಿ ಅಡಿ ನೀರನ್ನು ಕಾಲುವೆ ಮೂಲಕ ಹರಿಸುವ ಬಗ್ಗೆಯೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಮಳೆಗಾಲದಲ್ಲಿ ಸಮುದ್ರಕ್ಕೆ ಹರಿಯುವ ನೀರನ್ನು ಈಗಲೇ ತುಂಬಿಸಿಕೊಳ್ಳದೆ ಬೇಸಿಗೆಯಲ್ಲಿ ನೀರು ಹರಿಸುತ್ತೇವೆ ಎಂದರೆ ಹೇಗೆ ? 5 ಮೋಟರ್ ಮೂಲಕ ನೀರು ಹರಿಸಲು ಅವಕಾಶ ಇದ್ದರೂ ಕೇವಲ ಒಂದು ಮೋಟರ್ ಚಾಲನೆ ಮಾಡಿ ನೀರು ಬಿಡುತ್ತಿದ್ದಾರೆ’ ಎಂದು ದೂರಿದರು.
ಅಲ್ಲದೇ ಸಮುದ್ರಕ್ಕೆ ಹರಿಯುತ್ತಿರುವ ಭದ್ರಾದ 6 ಟಿಎಂಸಿ ಅಡಿ ನೀರನ್ನು ಈಗಲೇ ವಾಣಿವಿಲಾಸ ಜಲಾಶಯಕ್ಕೆ ಹರಿಸಬೇಕು ಎಂದು ಒತ್ತಾಯಿಸಿದರು.
ದೀಟೂರು ಏತ ನೀರಾವರಿ ಯೋಜನೆಯಡಿ ಎಚ್.ಡಿ. ಪೈಪ್ ಹಾಕಬೇಕು. ಏರ್ವೆಸೆಲ್ ವಾಟರ್ ಟ್ಯಾಂಕ್ಗಳನ್ನು ಅಳವಡಿಸಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.