ತ್ಯಾವಣಿಗೆ: ಪ್ರತಿ ವರ್ಷದಂತೆ ಶಿವರಾತ್ರಿಯಂದು ಸಮೀಪದ ಕೆಂಗಾಪುರ ಗ್ರಾಮದಲ್ಲಿ ಜರುಗುವ ಶ್ರಿರಾಮಲಿಂಗೇಶ್ವರ ಸ್ವಾಮಿ ಮುಳ್ಳುಗದ್ದುಗೆ ಮಹೋತ್ಸವವು ಅಕ್ಕಪಕ್ಕದ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಜರುಗಿತು.
16ರಿಂದ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಸ್ವಾಮಿಯು ಹೊರಮಠದಲ್ಲಿ ಐದು ದಿನಗಳ ಕಾಲ ಉಪವಾಸವಿದ್ದು, ಯಾರೊಡನೆಯೂ ಮಾತನಾಡದೆ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ.
ಸೋಮವಾರ ಬೆಳಿಗ್ಗೆ 6ರಿಂದ ಆರಂಭವಾದ ಮುಳ್ಳುಗದ್ದುಗೆ ಮಹೋತ್ಸವವನ್ನು ಕಾಂಗ್ರೆಸ್ ಮುಖಂಡ ಎಸ್.ವಿ. ಉಗ್ರಪ್ಪ ಉದ್ಘಾಟಿಸಿದರು, ಹೊರಮಠದಿಂದ ಹೊರಟ ಮೆರವಣಿಗೆಯಲ್ಲಿ ದುರ್ಗಮ್ಮ, ಲಿಂಗಾಪುರದ ಹನುಮಂತದೇವರು, ಸುರೇಶಸ್ವಾಮಿ, ಭೂತಪ್ಪ, ಪರಶುರಾಮ ದೇವರ ಉಪಸ್ಥಿತಿಯಲ್ಲಿ ಭಜನೆ, ಕೋಲಾಟ, ಡೊಳ್ಳುಕುಣಿತ, ಲಂಬಾಣಿ ನೃತ್ಯ, ಮುತ್ತೈದೆಯರ ಕುಂಭಾಮೇಳದೊಂದಿಗೆ ಒಳಮಠಕ್ಕೆ ಕರೆತರಲಾಯಿತು,
ಒಳಮಠದ ಹತ್ತಿರ ರಾಮಲಿಂಗೇಶ್ವರ ಸ್ವಾಮೀಜಿ ಮುಗಿಲನ್ನು ನೋಡುತ್ತಾ `ಅಂತರಂಗದ ಪಕ್ಷಿ ಹಾರಿತು. ಧರೆಯು ಬಾಯಿ ಬಿಟ್ಟೀತು, ತೂಗುವ ತೊಟ್ಟಿಲು ಕೈ ತಪ್ಪೀತು~ ಎಂದು ಕಾರ್ಣೀಕದಲ್ಲಿ ನುಡಿಯಿತು.
ಶ್ರಿರಾಮಲಿಂಗೇಶ್ವರ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 6 ಜೋಡಿ ವಿವಾಹವಾದರು. ಈ ವಧು-ವರರಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ತಾಳಿ, ಬಟ್ಟೆ ಕೊಡಲಾಯಿತು.
ರಾಮಲಿಂಗೇಶ್ವರ ಸ್ವಾಮಿ ನೇತೃತ್ವದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಯಕೊಂಡ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜನಾಯ್ಕ, ತಾ.ಪಂ. ಉಪಾಧ್ಯಕ್ಷ ಗಣೇಶನಾಯ್ಕ, ಎಂ.ಸಿ. ನಾರಾಯಣರಾವ್, ಅಣ್ಣೊಜಿರಾವ್, ಎಲ್. ಚಂದ್ರಾನಾಯ್ಕ, ರಮೇಶನಾಯ್ಕ, ಪಂಚಾಕ್ಷರಿ, ಗಣಚಾರಿ, ವೈದೇಹಿ ಹಿರೇಮಠ ಭಾಗವಹಿಸಿದ್ದರು, ಪ್ರಾಚಾರ್ಯ ಡಿ.ಎಂ. ಅನಿಲ್ಕುಮಾರ್ ಸ್ವಾಗತಿಸಿದರು. ಕೆ.ಎಸ್. ಅಶೋಕ ಕಾರ್ಯಕ್ರಮ ನಿರೂಪಿಸಿದರು. ದ್ವಿಗುಣ ಎಂ. ಅಂಗಡಿ ವಂದಿಸಿದರು.