ದಾವಣಗೆರೆ: ಮಾತೃಪೂರ್ಣ ಯೋಜನೆ ಜಾರಿಗೆ ಮೂಲಸೌಕರ್ಯ ಹಾಗೂ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತೆಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈಗಿರುವ ಪರಿಕರಗಳಿಂದ ಎಲ್ಲಾ ಫಲಾನುಭವಿಗಳಿಗೆ ಒಟ್ಟಿಗೆ ಅಡಿಗೆ ಮಾಡಿ, ಬಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೊಡ್ಡ ಗಾತ್ರದ ಸ್ಟೌ, ಕುಕ್ಕರ್ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವರ್ಷಕ್ಕೆ 8 ಅಡುಗೆ ಅನಿಲದ ಸಿಲಿಂಡರ್ಗಳನ್ನು ಒದಗಿಸುವ ವ್ಯವಸ್ಥೆ ಮಾಡಿದ್ದರೂ ಒಂದು ಅಂಗನವಾಡಿ ಕೇಂದ್ರಕ್ಕೆ 4 ಸಿಲಿಂಡರ್ಗಳನ್ನು ಮಾತ್ರ ಒದಗಿಸಲಾಗುತ್ತಿದೆ. ಅಲ್ಲದೇ, ಒಂದು ಸಿಲಿಂಡರ್ಗೆ ₹ 500 ನೀಡುತ್ತಿದ್ದು, ಈಗಿನ ದರ ₹ 800 ಆಗಿದ್ದು, ಹೆಚ್ಚುವರಿ ₹ 300 ಗಳನ್ನು ಕಾರ್ಯಕರ್ತೆಯರು ಕೈಯಿಂದ ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತೆಯರಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿದರು.
ಕೋಳಿಮೊಟ್ಟೆಗೆ ಕೇವಲ ₹ 5 ಮುಂಗಡವಾಗಿ ನೀಡುತ್ತಿದ್ದು, ಈಗಿನ ದರ ₹ 7 ಇದೆ. ₹ 2ಯನ್ನು ಕಾರ್ಯಕರ್ತೆಯರೇ ನೀಡಬೇಕಾಗಿದೆ. ಅಲ್ಲದೇ, ಫಲಾನುಭವಿಗಳ ಹಾಜರಾತಿಯ ಬಗ್ಗೆ ಯೋಜನಾಧಿಕಾರಿಗೆ ಎಸ್ಎಂಎಸ್ ಕಳುಹಿಸುವಂತೆ ಸೂಚನೆ ನೀಡಲಾಗಿದೆ. ಇದು ಕಾರ್ಯಕರ್ತರಿಗೆ ಸಾಧ್ಯವಾಗದ ಕಾರಣ ಈ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸ್ವಂತ ಕಟ್ಟಡವಿರದ ಅಂಗನವಾಡಿ ಕೇಂದ್ರಗಳ ಬಾಡಿಗೆಯನ್ನು ಪ್ರತಿ ತಿಂಗಳು ಕೊಡುತ್ತಿಲ್ಲ. ಜಿಲ್ಲೆಯ ಕೆಲವು ಕಡೆ ಐದು ತಿಂಗಳಿನಿಂದ ಬಾಡಿಗೆ ನೀಡಿಲ್ಲ. ಈ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸಿದರೂ ಫಲಪ್ರದವಾಗಿಲ್ಲ ಎಂದು ದೂರಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಪದಾಧಿಕಾರಿಗಳಾದ ಎಂ.ಬಿ.ಶಾರದಮ್ಮ, ವಿಶಾಲಕ್ಷಿ, ಎಸ್.ಎಸ್.ಮಲ್ಲಮ್ಮ, ಆವರಗೆರೆ ಚಂದ್ರು, ಆವರಗೆರೆ ವಾಸು ಅವರೂ ಇದ್ದರು.