ಹೊನ್ನಾಳಿ: ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿ ತುಂಗಭದ್ರಾ ನದಿಯಿಂದ ತಾಲ್ಲೂಕಿನ ಬೇಲಿಮಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆರೂ 7.40ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾಗುವ ಹಂತದಲ್ಲಿದೆ. ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಮೇಜರ್ ಟ್ಯಾಂಕ್ ಪೈಪ್ಲೈನ್, ಹೊಳೆಮೆಟ್ಟಿಲು ಕಾಮಗಾರಿಗಳಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರೂ 63ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಉತ್ತಮವಾದ ರಸ್ತೆ, ಬಾಕ್ಸ್ ಚರಂಡಿ ಸೇರಿದಂತೆ ಅನೇಕ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಕೋಣನತಲೆ ಗ್ರಾಮದಿಂದ ಬೇಲಿಮಲ್ಲೂರು ಗ್ರಾಮದವರೆಗೆ ಮುಖ್ಯರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಗೊಳಿಸಲುರೂ 90ಲಕ್ಷ ಮಂಜೂರಾಗಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಬೇಲಿಮಲ್ಲೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆರೂ 10ಲಕ್ಷ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆರೂ 18ಲಕ್ಷ ನೀಡಲಾಗಿದೆ. ಹೊಳೆಮೆಟ್ಟಿಲು ನಿರ್ಮಾಣಕ್ಕೆರೂ 17ಲಕ್ಷ, ಪೈಪ್ಲೈನ್ ಕಾಮಗಾರಿಗೆರೂ 6ಲಕ್ಷ, ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆರೂ 10ಲಕ್ಷ, ಬೀರಪ್ಪ ದೇವಾಲಯದ ಜೀರ್ಣೋದ್ಧಾರಕ್ಕೆರೂ2ಲಕ್ಷ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಲಾಗಿದೆ ಎಂದು ವಿವರಿಸಿದರು.
ಗಾ.ಪಂ ಅಧ್ಯಕ್ಷ ಹಳದಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸದಾಶಿವಪ್ಪ, ಎಪಿಎಂಸಿ ಉಪಾಧ್ಯಕ್ಷೆ ಎಚ್.ಡಿ. ರೇವಮ್ಮ, ಎಚ್. ಹಾಲಪ್ಪ, ಮಲ್ಲಪ್ಪ, ಭರ್ಮಪ್ಪ, ಉಮೇಶ್, ಮಂಜಮ್ಮ, ಸಿದ್ದಪ್ಪ, ಸವಿತಾ, ಸಿದ್ದಮ್ಮ, ಶಿವಲಿಂಗಪ್ಪ, ಗಿರಿಜಾಬಾಯಿ ಇದ್ದರು.