ದಾವಣಗೆರೆ: ಪ್ರತಿ ನಗರದಲ್ಲಿಯೂ ಜನರ ಅರಿವಿಗೆ ಬಾರದಂತೆ ಸಣ್ಣದಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಫಿಯಾ, ಸಂಸ್ಕೃತಿಯ ಶ್ರೀಮಂತಿಕೆ ಸಾರುವ ಪ್ರಯತ್ನದ ಕಥೆಯನ್ನು `ಟೋನಿ' ಒಳಗೊಂಡಿದೆ ಎಂದು ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ ಹೇಳಿದರು.
ಈ ಮಾಫಿಯಾಕ್ಕೆ ಎಲ್ಲರಂತೆಯೇ ನಾಯಕನೂ ಒಳಗಾಗುತ್ತಾನೆ. ಆ ಮಾಫಿಯಾದಿಂದ ಆತ ಹೊರ ಬರುತ್ತಾನೆಯೋ, ಇಲ್ಲವೋ ಎಂಬುದನ್ನು ತೋರಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2 ದಿನ ಥಾಯ್ಲೆಂಡ್, ಉಳಿದಂತೆ ಬೆಂಗಳೂರು, ಗುಲ್ಬರ್ಗ, ಕನಕಪುರದಲ್ಲಿ 43 ದಿನ ಚಿತ್ರೀಕರಿಸಲಾಗಿದೆ. ಆ. 9ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಂಬಂಧಗಳಿಗೆ ಹಾಗೂ ಸಮಾಜಕ್ಕೆ ಬೆಲೆ ಕೊಡಬೇಕು ಎಂಬ ಭಾವನೆಯಿಂದ ವೀಕ್ಷಕರು ಚಿತ್ರಮಂದಿರದಿಂದ ಹೊರಬರುತ್ತಾರೆ ಎಂದು ನಿರ್ಮಾಪಕರಲ್ಲೊಬ್ಬರಾಗಿರುವ ಕಿಟ್ಟಿ ಹೇಳಿದರು.
`ದುರಾಸೆ ಪಟ್ಟವರಿಗೆ ಕೊನೆಗೆ ಸಿಗುವುದು ನೋವು ಹಾಗೂ ಜನರ ಮೇಲೆ ಮಾಫಿಯಾ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಮ್ಮ ಸಂಸ್ಕೃತಿ ಮತ್ತು ಜಾನಪದದೊಂದಿಗೆ ಬೆರೆಸಿ ಹೇಳಲಾಗಿದೆ. ಕ್ಷಣದಲ್ಲಿ ಹಣ ಮಾಡಬೇಕು ಎನ್ನುವ ಯುವಕ ಹಾಗೂ ಪ್ರೀತಿಯೇ ಮುಖ್ಯ ಎಂದುಕೊಂಡಿರುವ ನಾಯಕಿ ಜೀವನ ಚಿತ್ರದ ಎಳೆ' ಎಂದರು.
ನಿರ್ದೇಶಕ ಜಯತೀರ್ಥ ಮಾತನಾಡಿ, `ಶ್ರೀನಗರ ಕಿಟ್ಟಿ ಹಾಗೂ ಐಂದ್ರಿತಾ ರೇ ಮೊದಲಿಗೆ ಒಟ್ಟಾಗಿ ನಟಿಸಿದ್ದಾರೆ. ಸಾಧು ಕೋಕಿಲ ಸಂಗೀತ ನೀಡಿದ್ದಾರೆ. 5 ಹಾಡು ಹಾಗೂ 4 ಬಿಟ್ಗಳಿವೆ (ಜನಪದ ತ್ರಿಪದಿ). ಕೆಲ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿಯೇ ಮೊದಲಿಗೆ ವಿಶೇಷವಾಗಿ ಚಿತ್ರಕತೆ ಹೇಳುವ ಹೊಸ ಪ್ರಯೋಗ ಮಾಡಿದ್ದೇನೆ. ಚಿತ್ರದಲ್ಲಿ ಪ್ರತಿ 20 ನಿಮಿಷಕ್ಕೊಮ್ಮೆ ಬೆಚ್ಚಿ ಬೀಳಿಸುವ ಸಂಗತಿಗಳಿವೆ' ಎಂದು ಮಾಹಿತಿ ನೀಡಿದರು.
ನಿರ್ಮಾಪಕ ಇಂದ್ರಕುಮಾರ್, ಛಾಯಾಗ್ರಾಹಕ ಜ್ಞಾನಮೂರ್ತಿ, ವೋಡಾಫೋನ್ ವಲಯ ವ್ಯವಸ್ಥಾಪಕ ಪ್ರಸಾದ್ ಉಪಸ್ಥಿತರಿದ್ದರು.
ನಂತರ ಚಿತ್ರತಂಡ ಸಿದ್ದಗಂಗಾ ಪ್ರೌಢಶಾಲೆಯಲ್ಲಿ ಚಿತ್ರದ ಪ್ರಚಾರ ನಡೆಸಿತು.
ಇಂದು ವಿದ್ಯುತ್ ವ್ಯತ್ಯಯ
ಹರಿಹರ: ನಗರದಲ್ಲಿ ವಿದ್ಯುತ್ ಮಾರ್ಗಗಳ ಕಾಮಗಾರಿ ನಡೆಯುತ್ತಿ ರುವುದರಿಂದ ಆ. 1ರ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಪ್ರದೇಶಗಳು: ಶೋಭ ಟಾಕೀಸ್, ಹಳೇ ಪಿ.ಬಿ. ರಸ್ತೆ, ಮೂರ್ಕಲ್ ಕಾಂಪೌಂಡ್, ಎಸ್ಜೆವಿಪಿ ಹಾಗೂ ಚರ್ಚ್ ರೋಡಿನ ಸುತ್ತಮುತ್ತಲಿನ ಪ್ರದೇಶಗಳು.