ವಿಜಯಪುರ: ತಾತನ ಅಂತ್ಯಕ್ರಿಯೆಗೂ ಹೋಗದೆ ಜಿಲ್ಲೆಯಲ್ಲಿ ನೆರೆ ಹಾವಳಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.
ಪಾಟೀಲ ಅವರ ತಾಯಿಯ ತಂದೆ, ಮಲ್ಲನಾಯ್ಕ್ ನಾಯ್ಕರ್ (91) ಅವರು ಶುಕ್ರವಾರ (ಆ.9) ಬೈಲಹೊಂಗಲ ತಾಲ್ಲೂಕು ನಾಗನೂರ ಗ್ರಾಮದಲ್ಲಿ ನಿಧನರಾಗಿದ್ದಾರೆ. ಅದೇ ಸಂದರ್ಭದಲ್ಲಿ ಇತ್ತ ಕೃಷ್ಣಾ ಹಾಗೂ ಭೀಮಾ ನದಿಗಳಲ್ಲಿ ಪ್ರವಾಹ ಉಂಟಾಗಿತ್ತು.
‘ತಾತ ನಿಧನರಾಗಿರುವ ವಿಷಯ ಗೊತ್ತಾಯಿತು. ಆದರೆ, ಅದೇ ದಿನ ಇಲ್ಲಿ ಪ್ರವಾಹ ಉಂಟಾಗಿದ್ದರಿಂದ ಅಂತ್ಯಕ್ರಿಯೆಗೆ ಹೋಗಲು ಆಗಲಿಲ್ಲ’ ಎಂದು ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.