ಹುಬ್ಬಳ್ಳಿ: ಬಂದ್ಗೆ ಕರೆ ನೀಡಿರುವವರು ರೋಲ್ ಕಾಲ್ ಹೋರಾಟಗಾರರು ಎಂದಿರುವ ಶಾಸಕರಾದ ಅರವಿಂದ ಬೆಲ್ಲದ ಮತ್ತು ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಖಂಡಿಸಿ ಶುಕ್ರವಾರ ನಗರದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ‘ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರದಲ್ಲಿ ಹೋರಾಟ ಮಾಡಿದರೆ ಕನ್ನಡಪರ ಹೋರಾಟಗಾರರರನ್ನು ರೋಲ್ಕಾಲ್ ಎಂದು ಕರೆದಿದ್ದು ಖಂಡನೀಯ. ನೆಲ, ಜಲ ಮತ್ತು ಭಾಷೆಯ ವಿಷಯ ಬಂದಾಗ ಕನ್ನಡಪರ ಸಂಘಟನೆಗಳು ಅನೇಕ ಬಾರಿ ಹೋರಾಟಗಳನ್ನು ಮಾಡಿವೆ. ಇಬ್ಬರೂ ಶಾಸಕರು ತಮ್ಮ ಹೇಳಿಕೆಗಳನ್ನು ವಾಸಪ್ ಪಡೆಯಬೇಕು. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತೋರಿಸಿದರು.
ಒಕ್ಕೂಟದ ಪ್ರಮುಖರಾದ ಮಂಜುನಾಥ ಲೂತಿಮಠ, ಸಂಜೀವ ಧುಮ್ಮಕ್ಕನಾಳ, ನಾಗರಾಜ ಬಡಿಗೇರ, ಶಿಖಾಮಣಿ ಲಿಂಗಂ, ಆಂಜನೇಯ ಪೂಜಾರ, ಹರೀಶ ಪಿಳ್ಳೈ, ಅನ್ನದಾನೇಶ್ವರ ಭಿಕ್ಷಾವರ್ತಿಮಠ ಇದ್ದರು.