ಹುಬ್ಬಳ್ಳಿ: ಮೊದಲ ಸೆಟ್ನಲ್ಲಿ ಹಿನ್ನಡೆ ಕಂಡರೂ ನಂತರ ಚೇತರಿಸಿಕೊಂಡ ನೂಲ್ವಿಯ ಸಿಬಿಎಸ್ ಕಾಲೇಜು ತಂಡ, ಕರ್ನಾಟಕ ವಿಶ್ವವಿದ್ಯಾಲಯದಅಂತರ ಕಾಲೇಜು 2ನೇ ವಲಯದ ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.
ರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆತಿಥ್ಯದಲ್ಲಿ ಎರಡು ದಿನ ನಡೆದ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು. ಬುಧವಾರ ನಡೆದ ಫೈನಲ್ನಲ್ಲಿ ಸಿಬಿಎಸ್ ಕಾಲೇಜು 23–25, 25–21, 15–12ರಲ್ಲಿ ನವಲಗುಂದದ ಶಂಕರ ಕಾಲೇಜು ಎದುರು ಗೆಲುವು ಸಾಧಿಸಿತು.
ಸೆಮಿಫೈನಲ್ ಪಂದ್ಯಗಳಲ್ಲಿ ಸಿಬಿಎಸ್ ಕಾಲೇಜು 2–0ರಲ್ಲಿ ಹುಬ್ಬಳ್ಳಿಯ ನೆಹರೂ ಕಾಲೇಜು ಮೇಲೂ, ಶಂಕರ ಕಾಲೇಜು 2–0ರಲ್ಲಿ ಮಂಡರಗಿಯ ಕೆ.ಆರ್. ಬೆಲ್ಲದ ಕಾಲೇಜಿನ ವಿರುದ್ಧವೂ ಗೆಲುವು ಪಡೆದಿದ್ದವು.ಶಂಕರ ಕಾಲೇಜಿನ ಉದಯ ಹಾದಿಮನಿ (ಉತ್ತಮ ಅಟ್ಯಾಕರ್), ಸಿಬಿಎಸ್ ಕಾಲೇಜಿನ ರಮೇಶ ಬಾಗಲ್ (ಉತ್ತಮ ಲ್ರೌಂಡರ್) ಮತ್ತು ವಿನಾಯಕ ಬಾಗಲ್ (ಉತ್ತಮ ಪಾಸರ್) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ,ಕಾಲೇಜಿನ ಪ್ರಾಚಾರ್ಯ ಡಾ. ಪಿ.ಬಿ. ಕಲ್ಯಾಣಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಸೋಮಶೇಖರ ಪಟ್ಟಣಶೆಟ್ಟಿ, ಡಾ. ವಸಂತ ಮುಂಡರಗಿ,ಪ್ರೊ. ಪ್ರಸನ್ನ ಪಂಢರಿ, ರಘು ಅಕಮಂಚಿ, ಡಾ. ಹತ್ತಿಮತ್ತೂರು, ಉಮಿ ಹಬೀಬ, ಶ್ರೀನಿವಾಸ ಕೊಪ್ಪದ ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಐಶ್ವರ್ಯಾ ಹೆಬ್ಬಳ್ಳಿ ಪ್ರಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಮಾಡಿಸಿದ್ದ ಕಾಲೇಜಿನ ಹಳೇ ವಿದ್ಯಾರ್ಥಿ ಚಂದ್ರು ದೊಡ್ಡ ಅವರನ್ನು ಪ್ರಾಚಾರ್ಯರು ಸನ್ಮಾನಿಸಿದರು.
ಅಂತರ ವಲಯ ಟೂರ್ನಿ ನಾಳೆ ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ. 29ರಂದು ಅಂತರ ವಲಯ ಪುರುಷರ ವಾಲಿಬಾಲ್ ಟೂರ್ನಿ ಜರುಗಲಿದ್ದು, ಎರಡನೇ ವಲಯದಲ್ಲಿ ಮೊದಲ ಎರಡು ಸ್ಥಾನ ಪಡೆದನೂಲ್ವಿಯ ಸಿಬಿಎಸ್ ಕಾಲೇಜು ತಂಡ,ನವಲಗುಂದದ ಶಂಕರ ಕಾಲೇಜು, ಭಟ್ಕಳದಲ್ಲಿ ನಡೆದಿದ್ದಮೂರನೇ ವಲಯದ ಅಗ್ರ ಎರಡು ತಂಡಗಳಾದ ಕಾರವಾರದ ಸದಾಶಿವಗಡ ಮತ್ತು ಕುಮುಟಾಕಲಾ ಮತ್ತು ವಾಣಿಜ್ಯ ಕಾಲೇಜು ತಂಡಗಳು ಅರ್ಹತೆ ಪಡೆದುಕೊಂಡಿವೆ. ಮೊದಲ ವಲಯದ ಟೂರ್ನಿ ಕೂಡ ಶುಕ್ರವಾರ (ಫೆ. 28) ಅಳ್ನಾವರದಲ್ಲಿ ಜರುಗಲಿದೆ.