ಹುಬ್ಬಳ್ಳಿ: ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಉಣಕಲ್ನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಅಂಗಾಂಗ ದಾನ ಪ್ರಕ್ರಿಯೆ ನಗರದ ತತ್ವಾದರ್ಶ ಆಸ್ಪತ್ರೆಯಲ್ಲಿ ಬುಧವಾರ ನಡೆಯಿತು.
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪವನ ಕಮ್ಮಾರ (22) ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರಿಂದ ಜೀವನ ಸಾರ್ಥಕತೆ ತಂಡವು ಪವನ ಅವರ ಕುಟುಂಬವನ್ನು ಸಂಪರ್ಕಿಸಿ, ಅಂಗಾಂಗ ದಾನ ಮಾಡುವಂತೆ ಮನವೊಲಿಸಿತು.
‘ಕುಟುಂಬದ ಸಮ್ಮತಿ ಮೇರೆಗೆ ಒಂದು ಕಿಡ್ನಿಯನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆ, ಇನ್ನೊಂದು ಕಿಡ್ನಿಯನ್ನು ಸುಚಿರಾಯು, ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಲಿವರ್ ಹಾಗೂ ಕಿಮ್ಸ್ಗೆ ಎರಡು ಕಣ್ಣುಗಳನ್ನು ದಾನ ಮಾಡಲಾಯಿತು’ ಎಂದು ಮೂತ್ರಪಿಂಡ ತಜ್ಞ ಡಾ. ವೆಂಕಟೇಶ ಮೊಗೇರ ತಿಳಿಸಿದ್ದಾರೆ.
ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಡಾ. ಭರತ ಕ್ಷತ್ರಿ, ಡಾ.ಎಸ್.ಬಿ. ಬಳಿಗಾರ, ಡಾ. ಈಶ್ವರ ಹೊಸಮನಿ, ಡಾ. ವಿದ್ಯಾ ನೇತೃತ್ವದ ತಂಡ ಭಾಗವಹಿಸಿತ್ತು.