ಹುಬ್ಬಳ್ಳಿ: ಖೊಟ್ಟಿ ದಾಖಲೆ ಸೃಷ್ಟಿಸಿ ನಕಲಿ ಸಹಿ ಮಾಡಿ ಮಹಿಳೆಯರ ಹೆಸರಲ್ಲಿ ಇದ್ದ 17ಎಕರೆ 19 ಗುಂಟೆ ಜಾಗವನ್ನು ಕೇಶ್ವಾಪುರದ ಹೊಸ ಬದಾಮಿ ನಗರದ ನಾಲ್ವರು ಆರೋಪಿಗಳು ತಮ್ಮ ಮಕ್ಕಳ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೇಶ್ವಾಪುರದ ಉದ್ಯಮಿ ಬಸವರಾಜ ಕಮತಗಿ ಮುಖ್ಯ ಆರೋಪಿಯಾಗಿದ್ದು, ಅವರು ಆನಂದ ಕಮತಗಿ, ಸುಲೋಚನಾ ಕಮತಗಿ, ವಿಶ್ವನಾಥ ಕಮತಗಿ, ಗಿರಿಜಾ ಪಾವಟೆ ಎಂಬುವರ ಜೊತೆ ಸೇರಿ, ಶೋಭಾ ಮಹೇಶ, ಅನ್ನಪೂರ್ಣ ಹಾಗೂ ಜಯಶ್ರೀ ಅವರ ಆಸ್ತಿ ಕಬಳಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಹುಬ್ಬಳ್ಳಿ ಉಪ ನೋಂದಣಿ ಕಚೇರಿಯಲ್ಲಿ ಖರೀದಿ ಕಾಗದ ಪತ್ರ ಮಾಡಿಕೊಂಡು, ಉತಾರದಲ್ಲಿ ತಮ್ಮ ಹೆಸರು ನಮೂದು ಮಾಡಿಕೊಂಡಿದ್ದಾರೆ. ಅಲ್ಲದೇ, ಖೊಟ್ಟಿ ದಾಖಲೆ ಮತ್ತು ಸಹಿ ಮಾಡಿ ಪ್ರತಿಷ್ಠಿತ ಬ್ಯಾಂಕ್ನಲ್ಲಿ ಶೋಭಾ, ಅನ್ನಪೂರ್ಣಾ, ಜಯಶ್ರೀ ಹೆಸರಿನಲ್ಲಿಯೇ ₹2 ಕೋಟಿ ಸಾಲ ಸಹ ಪಡೆದುಕೊಂಡಿದ್ದಾರೆ. ಕಾಗದ ಪತ್ರಗಳಲ್ಲಿ ನಕಲಿ ಸಹಿ ಮಾಡಿ ವಹಿವಾಟು ನಡೆಸಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ, ನಾಲ್ವರಿಗೆ ಗಾಯ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವೀರಾಪುರ ಓಣಿಯಲ್ಲಿ ಭಾನುವಾರ ಎರಡು ಗುಂಪುಗಳು ಹೊಡೆದಾಡಿಕೊಂಡ ಪರಿಣಾಮ ನಾಲ್ವರು ಗಾಯಗೊಂಡು ಕಿಮ್ಸ್ಗೆ ದಾಖಲಾಗಿದ್ದಾರೆ.
ಕೆ.ಬಿ. ನಗರದ ಸಾಗರ, ಸಿದ್ದಪ್ಪ, ರವಿ, ಮಂಜುಳಾ ಗಾಯಗೊಂಡವರು. ಅಲ್ಲಿಯ ನಿವಾಸಿಗಳಾದ ವಿನೋದ, ಮಂಜುನಾಥ, ರೇವಂತ್ ಎಂಬುವವರು ಹಲ್ಲೆ ನಡೆಸಿದವರಾಗಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬಿಗುವಿನ ವಾತಾವರಣ ತಿಳಿಗೊಳಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.