ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ತಂತ್ರಜ್ಞಾನದಿಂದ ಸಮಾನ ಅವಕಾಶ

ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅಭಿಮತ
Last Updated 5 ಫೆಬ್ರುವರಿ 2023, 7:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ತಂತ್ರಜ್ಞಾನ ಅಭಿವೃದ್ಧಿಯಿಂದ ದೇಶದ ಜನರ ಆತ್ಮವಿಶ್ವಾಸ ಹೆಚ್ಚಿದೆ. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುತ್ತಿವೆ’ ಎಂದು ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.

ನಗರದ ಬಿ.ವಿ.ಬಿ ಕಾಲೇಜಿನ ದೇಶಪಾಂಡೆ ಫೌಂಡೇಷನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಜನರ ಜೀವನಮಟ್ಟ ಸುಧಾರಣೆಯೇ ತಂತ್ರಜ್ಞಾನದ ಮುಖ್ಯ ಉದ್ದೇಶ. ಜನರು ತಂತ್ರಜ್ಞಾನಕ್ಕೆ ತೆರೆದುಕೊಂಡಾಗಲೇ ಸಂಪೂರ್ಣ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

‘ಆಧಾರ್‌ ಕಾರ್ಡ್‌ನಿಂದಾಗಿ ಅರ್ಹ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿವೆ. ಭ್ರಷ್ಟಾಚಾರ ಒಂದು ಹಂತಕ್ಕೆ ನಿಯಂತ್ರಣವಾಗಿದೆ. ಆದರೆ, ಜನರ ಮನಸ್ಥಿತಿ ಬದಲಾಯಿಸುವಂತಹ ತಂತ್ರಜ್ಞಾನದ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಸಿಟಿಒ ಆಧಾರ್‌ನ ಸಂಸ್ಥಾಪಕ ಶ್ರೀಕಾಂತ್ ನಧಮುನಿ, ‘ಕೋವಿಡ್‌ ಸಂದರ್ಭದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಅವಕಾಶಗಳು ಸಿಕ್ಕವು. ವಿಶ್ವದರ್ಜೆಯ ವೈದ್ಯ ಕೂಡ, ಇಲ್ಲಿನ ಗ್ರಾಮವೊಂದರ ಕಡುಬಡವನಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಯಾಗಿದೆ. ಸಾಮಾನ್ಯರು ಸಹ ಕ್ಯುಆರ್‌ ಕೋಡ್‌ ಬಳಸಿ, ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇ–ಗವರ್ನೆನ್ಸ್‌ ವ್ಯವಸ್ಥೆ ಅಧಿಕೃತ ಗುರುತು ನೀಡಿದೆ’ ಎಂದು ಹೇಳಿದರು.

ಐ–ಮೆರಿಟ್‌ ಸಂಸ್ಥೆಯ ಸಿಇಒ ರಾಧಾ ಬಸು, ‘ಸ್ತ್ರೀಸಬಲೀಕರಣಕ್ಕೆ ತಂತ್ರಜ್ಞಾನದ ಕೊಡುಗೆ ಅಪಾರ. ಗ್ರಾಮೀಣ ಭಾಗದ ಜನರಲ್ಲಿ ತಾಂತ್ರಿಕ ಜ್ಞಾನ ಇನ್ನಷ್ಟು ವೃದ್ಧಿಯಾಗಬೇಕು’ ಎಂದರು.

ದೇಶಪಾಂಡೆ ಫೌಂಡೇಷನ್‌ನ ಗ್ಲೋಬಲ್ ಸಿಟಿಒ ಶುಬೊ ಬಿಸ್ವಾಸ್‌ ಗೋಷ್ಠಿ ನಿರ್ವಹಿಸಿದರು. ವಿವಿಧ ಕ್ಷೇತ್ರಗಳ ಮೇಲೆ ತಂತ್ರಜ್ಞಾನದ ಪರಿಣಾಮದ ಕುರಿತು ಗೋಷ್ಠಿಗಳು ನಡೆದವು.

ಎನ್‌ಆರ್‌ಐಗಳ ಭಾರತ ಭೇಟಿ ಅವಧಿ ವಿಸ್ತರಿಸಿ: ‘ಅನಿವಾಸಿ ಭಾರತೀಯರು (ಎನ್‌ಆರ್‌ಐ) ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ. ಅವರು ಭಾರತಕ್ಕೆ ಭೇಟಿ ನೀಡುವ ಅವಧಿಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು' ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.

‘ಈ ಹಿಂದೆ ಎನ್ಆರ್‌ಐಗಳ ಭಾರತ ಭೇಟಿ ಅವಧಿಯನ್ನು 182 ದಿನಗಳಿಗೆ‌ ನಿಗದಿಪಡಿಸಲಾಗಿತ್ತು. ಹೊಸ ನಿಯಮದ ಅನ್ವಯ 120 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಉಳಿದ ದಿನಗಳಲ್ಲಿ ಅವರ ಅನುಪಸ್ಥಿತಿಯಿಂದ ದೇಶದ ಅಭಿವೃದ್ಧಿಗೆ ಅಗತ್ಯ ನೆರವು ಸಿಗದಿರಬಹುದು. ಆದರೆ, ಅವಧಿ ವಿಸ್ತರಣೆಯಿಂದ ಯಾವುದೇ ನಷ್ಟ ಆಗದು’ ಎಂದರು.

‘ಸಿಂಗಪುರದಲ್ಲಿ 8,000 ನವೋದ್ಯಮಗಳು ನೋಂದಣಿಯಾಗಿವೆ. ಭಾರತದಲ್ಲೂ ಉದ್ಯಮ ವಲಯದ ಪ್ರಗತಿಗೆ ಸರ್ಕಾರ ಇಂತಹ ಅಗತ್ಯ ಕ್ರಮ ಕೈಗೊಳ್ಳಬೇಕು. ಎನ್ಆರ್‌ಐಗಳ ವ್ಯಾಪಾರ-ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿದಾಗ ಉದ್ಯೋಗಾವಕಾಶಗಳು ಸಹ ಹೆಚ್ಚಲಿವೆ' ಎಂದು ಹೇಳಿದರು.

ಮಾದರಿ ಗ್ರಾಮ ನಿರ್ಮಿಸಿ: ‘ಸೆಪ್ಟೆಂಬರ್‌ನಲ್ಲಿ ನಡೆಯುವ ಜಿ–20 ಶೃಂಗ ಸಭೆ ಅಂಗವಾಗಿ ನವದೆಹಲಿ ಸಮೀಪ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳುಳ್ಳ ಮಾದರಿ ಗ್ರಾಮ ನಿರ್ಮಿಸಿದರೆ, ಇತರ ದೇಶಗಳಿಗೂ ಇದು ಪ್ರೇರಣೆಯಾಗಲಿದೆ. ಭಾರತದಲ್ಲಿನ ತಾಂತ್ರಿಕ ಅಭಿವೃದ್ಧಿಯ ಬಗ್ಗೆ ಬೇರೆ ದೇಶಗಳ ಗಮನ ಸೆಳೆಯಬಹುದು' ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT