ಹುಬ್ಬಳ್ಳಿ: ನಾಲ್ಕು ತಿಂಗಳಿಂದ ನೇಕಾರರಿಗೆ ನೂಲು ಒದಗಿಸುವುದನ್ನು ಸ್ಥಗಿತಗೊಳಿಸಿದ್ದರಿಂದ ಉತ್ತರ ಕರ್ನಾಟಕದಾದ್ಯಂತ ಎಲ್ಲ ಮಗ್ಗಗಳು ಸ್ತಬ್ದವಾಗಿವೆ. ಇದಕ್ಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಆರೋಪಿಸಿ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಇಲ್ಲಿನ ವಿದ್ಯಾನಗರದಲ್ಲಿರುವ ನಿಗಮದ ಕೇಂದ್ರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ನೇಕಾರರು, ’ಆರು ತಿಂಗಳಿಂದ ಸೂಟಿಂಗ್ ಹಾಗೂ ಕಾಟನ್ ಮಗ್ಗಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ನೇಕಾರರಿಗೆ ಭತ್ಯೆಗಳನ್ನು ಕೊಡುವುದನ್ನು ನಿಲ್ಲಿಸಲಾಗಿದೆ. ನೇಕಾರರಿಗೆ ಇಂದಿನ ಮಜೂರಿ ಬೆಲೆ ಏರಿಕೆಗೆ ಅನುಸಾರವಾಗಿ ಹೆಚ್ಚಳ ಮಾಡಿಲ್ಲ. ನೇಕಾರರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವುದು ನಿಂತುಹೋಗಿದೆ. ಗುಣಮಟ್ಟ ನಿಯಂತ್ರಣದ ನೆಪದಲ್ಲಿ ನೇಕಾರರು ನೇಯ್ದ ಬಟ್ಟೆಗಳನ್ನು ತಿರಸ್ಕರಿಸಲಾಗುತ್ತಿದೆ. 40 ವರ್ಷಗಳಲ್ಲಿ ನೇಕಾರರಿಗೆ ಇಂತಹ ಕಠಿಣ ನಿಯಮಗಳು ಎಂದೂ ಎದುರಾಗಿರಲಿಲ್ಲ‘ ಎಂದು ಟೀಕಿಸಿದರು.
ವ್ಯವಸ್ಥಾಪಕ ನಿರ್ದೇಶಕರು ನೇಕಾರರ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರನ್ನು ಆ ಸ್ಥಾನದಿಂದ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ನೇಕಾರ ಕುಟುಂಬಗಳನ್ನು ಶಾಶ್ವತವಾಗಿ ನಿರುದ್ಯೋಗಿಯಾಗಿಸುತ್ತಾರೆ ಎಂದು ಸಂಘದ ಉಪಾಧ್ಯಕ್ಷ ಎನ್.ಜೆ. ಮಾಳವದೆ ಒತ್ತಾಯಿಸಿದರು.
ಮುಖಂಡರಾದ ಫಕ್ಕೀರಪ್ಪ ಗರಗದ, ತೇಜಪ್ಪ, ನಾಗಪ್ಪ ಬಾರಿಗಿಡದ, ದೇವೇಂದ್ರ ಕೋಟಿ, ಶಿವಲಿಂಗಪ್ಪ ಯಂಡಿಗೇರಿ, ಶಿವು ಬಾರಿಗಿಡದ, ಶಿಗ್ಲಿ ಗ್ರಾಮದ ನೇಕಾರರಾದ ರಾಮಚಂದ್ರ ಮುರಾಳ, ಬಿ.ಎಸ್.ಗುಡವಿ ಇದ್ದರು.