ಹುಬ್ಬಳ್ಳಿ: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸ್ವಚ್ಛತಾ ಸೇನಾನಿಗಳಂತೆ ಕಾರ್ಯನಿರ್ವಹಿಸುತ್ತಿರುವ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಶನಿವಾರ ಇನ್ಫೊಸಿಸ್ ಫೌಂಡೇಷನ್ನಿಂದ ನೀಡಲಾದ 2,800 ಆಹಾರ ಸಾಮಗ್ರಿಗಳ ಕಿಟ್ಗಳನ್ನು ಫೌಂಡೇಷನ್ನ ಅಮೋಲ್ ಕುಲಕರ್ಣಿ ಶುಕ್ರವಾರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಹಸ್ತಾಂತರಿಸಿದರು.
ಆಟೊ ಟಿಪ್ಪರ್ ಚಾಲಕರು, ಸಹಾಯಕರು, ಲೋಡರ್ಸ್, ಜೆಟ್ಟಿಂಗ್ ಯಂತ್ರದ ಸಿಬ್ಬಂದಿಗೆ ವಲಯವಾರು ಕಿಟ್ ನೀಡಲಾಯಿತು. ಪ್ರತಿ ಕಿಟ್ನಲ್ಲಿ 5 ಕೆ.ಜಿ. ಅಕ್ಕಿ, 1 ಕೆ.ಜಿ. ತೊಗರಿಬೇಳೆ, 1 ಲೀಟರ್ ಅಡುಗೆ ಎಣ್ಣೆ, ಮಸಾಲೆ ಪದಾರ್ಥಗಳು, ಅರ್ಧ ಕೆ.ಜಿ. ಕಡಲೆಬೇಳೆ ಸೇರಿದಂತೆ ಅಗತ್ಯ ವಸ್ತುಗಳಿವೆ.
ಸಂಕಷ್ಟದ ಸಮಯದಲ್ಲಿ ಇನ್ಫೊಸಿಸ್ ನೀಡಿದ ನೆರವಿನ ಬಗ್ಗೆ ಇಟ್ನಾಳ ಶ್ಲಾಘಿಸಿದರು. ಪಾಲಿಕೆಯ ಜಂಟಿ ಆಯುಕ್ ಅಜೀಜ್ ದೇಸಾಯಿ, ಘನತ್ಯಾಜ್ ಯವಸ್ತು ನಿರ್ವಹಣೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿಜಯ ಕುಮಾರ್ ಇದ್ದರು.
ನೆರವು: ನಗರದ ಮಜೇಥಿಯಾ ಫೌಂಡೇಷನ್ ವತಿಯಿಂದ ಬಟ್ಟೆಯಿಂದ ಹೊಲಿದ ಮಾಸ್ಕ್ಗಳನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಹಸ್ತಾಂತರಿಸಲಾಯಿತು. ಫೌಂಡೇಷನ್ನ ಸದಸ್ಯರು ಶುಕ್ರವಾರ ಸಿದ್ಧಾರೂಢ ಮಠ ಮತ್ತು ಎಲ್ಲ ಪೊಲೀಸ್ ಠಾಣೆಗಳಿಗೆ ಸುಮಾರು ಐದು ಸಾವಿರ ಮಾಸ್ಕ್ಗಳನ್ನು ನೀಡಿದರು.
ಕಿಟ್ ವಿತರಣೆ: ಸಿಐಟಿಯು, ಕಾರ್ಪೊರೇಷನ್ ಬ್ಯಾಂಕ್ ನೌಕರರ ಸಂಘ, ವಿಮಾ ನೌಕರರ ಸಂಘ ಮತ್ತು ಕರವೇ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ಶನಿವಾರ ಎಪಿಎಂಸಿ ಪ್ರದೇಶದ ನಿರ್ಗತಿಕ ಮಹಿಳೆಯರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡಲಾಯಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಅಮೃತ ಇಜಾರಿ, ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರಿ, ಕತಾಲಸಾಬ ಮುಲ್ಲಾ, ಕರಿಯಪ್ಪ ದಳವಾಯಿ, ಮಂಜುನಾಥ ಹುಜರಾತಿ, ಮುತ್ತು ಚಲವಾದಿ ಪಾಲ್ಗೊಂಡಿದ್ದರು.