ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಹತ್ಯೆ ಪ್ರಕರಣ: ಆಮೂಲಾಗ್ರ ತನಿಖೆ ಆಗಲಿ- ಜಗದೀಶ ಶೆಟ್ಟರ್

Published 20 ಏಪ್ರಿಲ್ 2024, 12:50 IST
Last Updated 20 ಏಪ್ರಿಲ್ 2024, 12:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ರಾಜ್ಯದ ವ್ಯವಸ್ಥೆ ಹದಗೆಟ್ಟಿದೆ. ವ್ಯವಸ್ಥಿತ ರೀತಿಯಲ್ಲಿ ಹತ್ಯೆ ನಡೆದಿದ್ದು, ವಿಶೇಷ ತನಿಖಾ ತಂಡದಿಂದ ಆಮೂಲಾಗ್ರ ತನಿಖೆ ನಡೆಯಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಆಗ್ರಹಿಸಿದರು.

ನಗರದ ಬಿಡನಾಳದಲ್ಲಿರುವ ಮೃತ ನೇಹಾ ಹಿರೇಮಠ ಅವರ ಮನೆಗೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲೂ ಹುಡುಗಿಯೊಬ್ಬಳ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಇಲ್ಲಿಯೂ ಅದೇ ಮಾದರಿ ಹತ್ಯೆ ನಡೆದಿದೆ. ಲವ್ ಜಿಹಾದ್‌ಗೆ ತರಬೇತಿ ಕೇಂದ್ರವಿರಬೇಕು ಅನಿಸುತ್ತಿದೆ‌ ಎಂದು ಅನುಮಾನ ವ್ಯಕ್ತಪಡಿಸಿದರು.

ಸರ್ಕಾರ ಸರಿ ಇಲ್ಲದಾಗ ಹತ್ಯೆಗಳು ನಡೆಯುತ್ತವೆ. ಉತ್ತರ ಪ್ರದೇಶ ಈ ಹಿಂದೆ‌ ಗೂಂಡರಾಜ್ಯವಾಗಿತ್ತು. ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ನಂತರ ಬಿಗಿ ಆಡಳಿತ ಜಾರಿಗೆ ಬಂದಿತು. ಈಗ ಅಲ್ಲಿನ ಜನ ಶಾಂತಿಯಿಂದ ಇದ್ದಾರೆ.

ಈ ಪ್ರಕರಣದಲ್ಲಿ ಹಂತಕನನ್ನು ಬಂಧಿಸಲಾಗಿದೆಯೇ ಹೊರತೆ ಕೊಲೆಗೆ ಕಾರಣ, ಆತನ ಹಿನ್ನೆಲೆ ಕುರಿತು ವಿಚಾರಣೆ ಮಾಡಿಲ್ಲ. ಕೃತ್ಯದಲ್ಲಿ ಇನ್ನೂ ಐವರು ಕೈಜೋಡಿಸಿರುವ ಬಗ್ಗೆ ಮೃತಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಮೃತಳ ಚಾರಿತ್ರ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ವ್ಯವಸ್ಥಿತ ತಂತ್ರವಾಗಿದೆ ಎಂದರು.

ಮೃತಳ ಕುಟುಂಬವನ್ನು ಮುಖ್ಯಮಂತ್ರಿ ಅವರು ಭೇಟಿ ನೀಡಿ, ಸಾಂತ್ವನ ಹೇಳಬೇಕಿತ್ತು. ಅದರ ಬದಲು ಮುಖ್ಯಮಂತ್ರಿ ಹಾಗೂ ಗೃಹಸಚಿವರು, ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸದೆ, ಅಧಿಕಾರಿಗಳು ನೀಡಿದ ಮಾಹಿತಿಯನ್ನೇ ಪುನರುಚ್ಚರಿಸುತ್ತಿದ್ದಾರೆ. ತುಷ್ಟೀಕರಣ ನೀತಿಗೆ ಜೋತು ಬಿದ್ದಿದ್ದಾರೆ. ಅವರ ಹೇಳಿಕೆ ಗಮನಿಸಿದರೆ ಪ್ರಕರಣ ಮುಚ್ಚಿ ಹಾಕುವ ಆತಂಕವಿದೆ ಎಂದು ಹೇಳಿದರು.

ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ. ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಪೊಲೀಸರಿಗೆ ಅಧಿಕಾರ ನೀಡಿದರೆ ಎನ್‌ಕೌಂಟರ್ ಮಾಡುತ್ತಾರೆ. ಇದರ ಬದಲು ಕಾನೂನು ಜಾರಿಗೊಳಿಸಬೇಕೆಂದು ಸುಮ್ಮನೆ ಹೇಳಿದರೆ ಆಗುವುದಿಲ್ಲ. ಇಲ್ಲವಾದರೆ ಹಂತಕ ಜಾಮೀನು ಮೇಲೆ ಹೊರಗೆ ಬಂದು, ಆರಾಮಾಗಿ ಇರುತ್ತಾರೆ ಎಂದು ಹೇಳಿದರು.

ಮೃತ ನೇಹಾ ಅವರ ತಂದೆ ನಿರಂಜನ ಹಿರೇಮಠ ಅವರು ಜಗದೀಶ ಶೆಟ್ಟರ್ ಜೊತೆಗೆ ಮಾತನಾಡಿ, ಮಗಳು ನೇಹಾ ಶಿಸ್ತಿನಿಂದ, ಜವಾಬ್ದಾರಿಯಿಂದ ವರ್ತಿಸುತ್ತಿದ್ದಳು. ಅವಳನ್ನೇ ಕೊಲ್ಲಬೇಕೆಂದು ಗುರಿಯಾಗಿಸಿಕೊಂಡು ಇಂತಹ ಕೃತ್ಯ ಎಸಗಿದ್ದಾರೆ. ಹಂತಕನಿಗೆ ಹಲವರು ಬೆಂಬಲ ನೀಡಿದ್ದು, ಅವರ ಹೆಸರನ್ನೂ ನೀಡಿರುವೆ. ಆದರೆ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ತಿಳಿಸಿದರು.

ಹಂತಕ ಹಾಗೂ ನೇಹಾ ನಡುವೆ ಪ್ರೀತಿ ಇತ್ತು ಎಂದು ಕುಟುಂಬದವರು ಸುಳ್ಳು ಹೇಳುತ್ತಿದ್ದಾರೆ. ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಮಾತನಾಡಿ, ಸುಸಂಸ್ಕೃತ ಹೆಣ್ಣುಮಗಳ ಹತ್ಯೆ ಖಂಡನೀಯ. ಈ ಕೃತ್ಯದಲ್ಲಿ ಯಾರೆಲ್ಲ ಪಾಲುದಾರರೋ ಅವರೆಲ್ಲರಿಗೂ ಶಿಕ್ಷೆ ಅಗಬೇಕು. ಆದರೆ, ರಾಜಕಾರಣಿಗಳು ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT