ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ಆಗಿರದಿದ್ದರೆ ಸಿದ್ದರಾಮಯ್ಯ ಬಣ್ಣ ಬಯಲಾಗುತಿತ್ತು; ಪ್ರಲ್ಹಾದ ಜೋಶಿ ವ್ಯಂಗ್ಯ

Published 4 ಏಪ್ರಿಲ್ 2024, 14:28 IST
Last Updated 4 ಏಪ್ರಿಲ್ 2024, 14:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಿದ್ದರಾಮಯ್ಯ ಅವರಿಗೆ ನೀತಿ, ಸಿದ್ಧಾಂತ ಇಲ್ಲ. ಮುಖ್ಯಮಂತ್ರಿ ಆಗಿರದಿದ್ದರೆ ಅವರ ಬಣ್ಣ ಬಯಲಾಗುತಿತ್ತು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

‘ಪ್ರಧಾನಿ, ರಾಷ್ಟ್ರಪತಿ ಮಾಡಿದರೂ ಬಿಜೆಪಿಗೆ ಹೋಗಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರನ್ನು ನಮ್ಮ ಪಕ್ಷಕ್ಕೆ ಕರೆದಿಲ್ಲ. ಜೆಡಿಎಸ್‌ನಲ್ಲಿದ್ದಾಗ ಅವರು ಸೋನಿಯಾ ಗಾಂಧಿಗೆ ಬಯ್ದಿದ್ದು ನೋಡಿದರೆ ಇವರು ಅವರ ಮುಖವನ್ನೂ ನೋಡುವುದು ಸಾಧ್ಯವಾಗಬಾರದಿತ್ತು. ಆದರೆ ಈಗ ರಾಹುಲ್‌ ಗಾಂಧಿ ಎದುರು ಸೊಂಟ ಬಗ್ಗಿಸಿ ನಿಲ್ಲುತ್ತಾರೆ’ ಎಂದು ಲೇವಡಿ ಮಾಡಿದರು.

'ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಏನು ನಡೆದಿದೆ ಎಂಬುದು ಇಡೀ ಜಗತ್ತಿಗೆ ಗೊತ್ತು. ಕಾಂಗ್ರೆಸ್‌ನ ಆಂತರಿಕ ಭಿನ್ನಮತ ಮತ್ತು ಅಧಿಕಾರಕ್ಕೆ ಇರುವ ಪೈಪೋಟಿಯಿಂದ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಲಿವೆ’ ಎಂದರು.

‘ದೆಹಲಿಯಲ್ಲಿ ಅಮಿತ್‌ ಶಾ ಮತ್ತು ಕೆ.ಎಸ್.ಈಶ್ವರಪ್ಪ ಅವರ ಭೇಟಿ ಆಗದಿರುವ ಅಂಶ ಮಾಧ್ಯಮದಿಂದ ಗೊತ್ತಾಯಿತು. ಈಶ್ವರಪ್ಪ ಬಿಜೆಪಿಯ ಕರ್ಮಠ ಕಾರ್ಯಕರ್ತ. ಅವರು ಪಕ್ಷದ ಪರ ಇರುತ್ತಾರೆ ಎಂಬ ವಿಶ್ವಾಸ ಇದೆ’ ಎಂದರು.

‘ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಮೂರನೇ ಸಲ ಅವರು ಹೀಗೆ ಹೇಳಿದ್ದಾರೆ. ಅವರ ಆರೋಗ್ಯ ಚೆನ್ನಾಗಿರಲಿ. ಅವರು ಚುನಾವಣಾ ಕಣಕ್ಕಿಳಿಯಲಿ, ಆರೋಗ್ಯಕರ ಸ್ಪರ್ಧೆ ನಡೆಯುತ್ತಿರಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT