ಹುಬ್ಬಳ್ಳಿ: ‘ಸರ್ಕಾರಿ ಸ್ವಾಮ್ಯದ ಉದ್ಯಮಗಳ (ಪಿಎಸ್ಯು) ಜಮಾನ ಮುಗಿದಿದೆ. ಹಾಗಾಗಿ, ಕಾರ್ಯಕ್ಷಮತೆಯಿಂದ ಉದ್ಯಮ ನಡೆಸುವ ಖಾಸಗಿ ವ್ಯಕ್ತಿಗಳ ಅಗತ್ಯವಿದೆ’ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ಮಾರಾಟಕ್ಕಿಟ್ಟರೂ ಖರೀದಿಸಲು ಯಾರೂ ಬರುವುದಿಲ್ಲ. ಹಿಂದಿನ (ಕಾಂಗ್ರೆಸ್) ಸರ್ಕಾರದ ಸಚಿವರು ಅಗತ್ಯಕ್ಕಿಂತ ಹೆಚ್ಚು ವಿಮಾನಗಳನ್ನು ಖರೀದಿಸಿದ್ದರು. ಸಂಸ್ಥೆ ನಿತ್ಯ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ’ ಎಂದರು.
‘ದೇಶದ ಪಿಎಸ್ಯುಗಳ ಇಂತಹ ಸ್ಥಿತಿಯಿಂದಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಖಾಸಗಿ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅದಕ್ಕಾಗಿ, ಉದ್ಯಮಿಗಳ ಜತೆ ಹೆಚ್ಚು ಒಡನಾಟ ಇಟ್ಟುಕೊಳ್ಳಲಾಗಿದೆ. ಅದನ್ನೇ ಕೆಲವರು ಗೇಲಿ ಮಾಡುತ್ತಾರೆ. ಆದರೆ, ನಮಗೆ ಈ ವಿಷಯದಲ್ಲಿ ಸ್ಪಷ್ಟತೆ ಇದೆ’ ಎಂದು ಹೇಳಿದರು.
‘ಹಿಂದೆ ಜಿಡಿಪಿಗೆ ಕೃಷಿ ಕ್ಷೇತ್ರದ ಪಾಲು ಶೇ 60ರಷ್ಟು ಇತ್ತು. ಈಗ ಕೇವಲ ಶೇ 16ಕ್ಕೆ ಬಂದು ನಿಂತಿದೆ. ಹಾಗಾಗಿ, ದೇಶದ ಬಡವರಿಗೆ ನಾವು ಉತ್ತಮ ಸೇವೆಗಳನ್ನು ನೀಡಲು, ಅನಿವಾರ್ಯವಾಗಿ ವಾಣಿಜ್ಯೋದ್ಯಮವನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಭಿಪ್ರಾಯಪಟ್ಟರು.
* ಖಾಸಗಿ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ಯಮಿಗಳ ಜತೆ ಹೆಚ್ಚು ಒಡನಾಟ ಹೊಂದಿರುವ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇದೆ. -ಪ್ರಹ್ಲಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರ ಸಚಿವ