ಕುಂದಗೋಳ: ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ತಾಲ್ಲೂಕಿನ ಜನರಲ್ಲಿ ಖುಷಿ ಮೂಡಿಸಿದೆಯಾದರೂ; ಜನಜೀವನದ ಮೇಲೆ ಪರಿಣಾಮ ಬೀರಿದೆ. ತಾಲ್ಲೂಕಿನಲ್ಲಿ ಒಟ್ಟು 44 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ವಿವಿಧ ಭಾಗಗಳಲ್ಲಿ ಬುಧವಾರ ತಡರಾತ್ರಿ ವರುಣನ ಆರ್ಭಟಕ್ಕೆ ಅಲ್ಲಲ್ಲಿ ಸಣ್ಣಪುಟ್ಟ ಕೆರೆಕಟ್ಟೆಗಳು, ಕೃಷಿ ಹೊಂಡ ತುಂಬಿ ಹರಿಯುತ್ತಿವೆ.
ಕುಂದಗೋಳ ಪಟ್ಟಣದಲ್ಲಿ ಎರಡು, ತಾಲ್ಲೂಕಿನ ಜಿಗಳೂರ, ಹಂಚಿನಾಳ, ದೇವನೂರು, ಕುಬಿಹಾಳ, ಸುಲ್ತಾನಪುರ, ಬರದ್ವಾಡ, ಹಿರೇಹರಕುಣಿ, ಪಶುಪತಿಹಾಳ, ಸಂಶಿ, ಹಿರೇಬೂದಿಹಾಳ ಗ್ರಾಮಗಳಲ್ಲಿ ಮನೆಗಳು ಕುಸಿದಿವೆ.
ಕುಂದಗೋಳ ಪಟ್ಟಣದಿಂದ ಗುಡೇನಕಟ್ಟಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಚರಂಡಿ ನೀರು ತುಂಬಿ ರಸ್ತೆಗೆ ಬಂದಿದ್ದರಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಹೊಸದಾಗಿ ನಿರ್ಮಾಣವಾಗುತ್ತಿರುವ ಶಿರೂರು ಗ್ರಾಮದ ಬ್ರಿಡ್ಜ್ ಹತ್ತಿರ ತರ್ಲಘಟ್ಟದಲ್ಲಿ ಬಸ್ ಕೆಸರಿನಲ್ಲಿ ಸಿಲುಕಿದ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪೂರ್ತಿದಿನ ಪರದಾಡುವಂತಾಯಿತು.
ನವಲಗುಂದ ವರದಿ: ನವಲಗುಂದ ತಾಲ್ಲೂಕಿನಲ್ಲಿ ಸುಮಾರು 30 ಮನೆಗಳಿಗೆ ಸಂಪೂರ್ಣವಾಗಿ ಹಾನಿಯಾಗಿದೆ. ಬ್ಯಾಲ್ಯಾಳ, ಬಳ್ಳೂರ, ಹನಸಿ, ತಿರ್ಲಾಪೂರ, ಹೆಬ್ಬಾಳ, ಶಿರಕೋಳ, ಜಾವೂರ, ಬೇಳಹಾರದಲ್ಲಿ ಮನೆಗಳಿಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ಅನಿಲ ಬಡಿಗೇರ ತಿಳಿಸಿದ್ದಾರೆ.