ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ಮತ್ತು ಲಲಿತ ಕಲಾ ವಿಭಾಗದ ಡಾ.ಗಂಗೂಬಾಯಿ ಹಾನಗಲ್ ಪೀಠದ ವತಿಯಿಂದ ಶನಿವಾರ, ಡಾ.ಗಂಗೂಬಾಯಿ ಹಾನಗಲ್ ಅವರ ಮೂರನೇ ವರ್ಷದ ಪುಣ್ಯತಿಥಿಯನ್ನು ಆಚರಿಸಲಾಯಿತು.
ಹಣಕಾಸು ಅಧಿಕಾರಿ ಡಾ.ರಾಜಶ್ರೀ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮನೋಜ ಹಾನಗಲ್ ಸಂಗೀತದ ಪೋಷಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಬಿ.ಹಿಂಚಿಗೇರಿ, `ಕೇವಲ ಪುಣ್ಯತಿಥಿಯಲ್ಲದೇ ಪ್ರತಿದಿನವೂ ಸಂಗೀತ ಕಾರ್ಯಕ್ರಮವನ್ನು ನಡೆಸುವಂತಾಗಬೇಕು~ ಎಂದರು. ವಿಭಾಗದ ಮುಖ್ಯಸ್ಥ ಡಾ.ಮೃತ್ಯುಂಜಯ ಅಗಡಿ ಡಾ.ಗಂಗೂಬಾಯಿ ಹಾನಗಲ್ ಅವರ ಸಂಗೀತ ಕ್ಷೇತ್ರದ ಸಾಧನೆ ಹಾಗೂ ಕೊಡುಗೆಯ ಬಗ್ಗೆ ಮಾತನಾಡಿದರು.
ನಂತರ ಅರಣ್ಯಕುಮಾರ ಮುನ್ನೇನಿ ಸಿತಾರವಾದನದಲ್ಲಿ ರಾಗ ನಟ್ಭೈರವ್ ಮತ್ತು ಮಿಶ್ರಮಾಂಡ ದುನ್ಗಳನ್ನು ಪ್ರಸ್ತುತಪಡಿಸಿದರು. ದುಂಡಯ್ಯ ಸ್ವಾಮಿ ತಬಲಾ ಸಾಥ್ ನೀಡಿದ್ದರು.