ಹುಬ್ಬಳ್ಳಿ: ಜಾತ್ರೆಯಲ್ಲಿ ಗಿರಿಗಿಟ್ಲೆಯಂತೆ ಕಾಣುವ ಯಂತ್ರವೊಂದು ಕಳೆದೊಂದು ವಾರದಿಂದ ಉಣಕಲ್ ಸಿದ್ದಪ್ಪಜ್ಜನ ಗುಡಿ ಹಾಗೂ ಕೆರೆಯ ಮುಂಭಾಗದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ರಸ್ತೆಯ ಅರ್ಧಭಾಗವನ್ನು ಆಕ್ರಮಿಸಿ ತೊಟ್ಟಿಲಿನ ಆಕಾರದಲ್ಲಿ ನಿಲ್ಲುವ ಈ ಯಂತ್ರ ಉಣಕಲ್ ಭಾಗದಲ್ಲಿ ಮಣ್ಣಿನ ಪರೀಕ್ಷೆ ನಡೆಸುತ್ತಿದೆ.
ಬಿಆರ್ಟಿಎಸ್ ಯೋಜನೆಯಡಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ಸಂಚಾರದ ದಾರಿಗಾಗಿ ಫ್ಲೈಓವರ್ ನಿರ್ಮಿಸಲಾಗುತ್ತಿದ್ದು, ಕಾಮಗಾರಿಗೆ ಮಣ್ಣು ಸೂಕ್ತವಾಗಿದೆಯೇ ಎಂಬುದನ್ನು ತಿಳಿಯಲು ಕಳೆದೊಂದು ವಾರದಿಂದ ಈ ಪರೀಕ್ಷೆ ಆರಂಭಿಸಲಾಗಿದೆ.
ಫ್ಲೈಓವರ್ ನಿರ್ಮಾಣಕ್ಕೆ ಪ್ರತಿ 75 ಮೀಟರ್ ದೂರಕ್ಕೆ ಒಂದರಂತೆ ಪಿಲ್ಲರ್ ಗಳನ್ನು (ಆಧಾರ ಕಂಬ) ನಿರ್ಮಿಸಲಾಗುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ನಗರದ ಪಾಟೀಲ್ ಎಂಜಿನಿಯರ್ಸ್ ಮತ್ತು ಕಂಟ್ರಾಕ್ಟರ್ಸ್ ಸಂಸ್ಥೆ ಮಣ್ಣು ಪರೀಕ್ಷೆ ಕೈಗೊಂಡಿದೆ ಎನ್ನುತ್ತಾರೆ ಸಂಸ್ಥೆ ತಂತ್ರಜ್ಞ ಕಿರಣ್ ಗೌಡ.
ರಸ್ತೆ ಮಧ್ಯದಿಂದ ರಂಧ್ರ ಕೊರೆದು ಅಲ್ಲಿಂದ ಪಕ್ಕದ ಮಣ್ಣಿನ ಕಾಲುವೆಗೆ ನಿರಂತರ ನೀರು ಹರಿಸುವ ಹಾಗೂ ತಾಂತ್ರಿಕ, ರಾಸಾಯನಿಕ ಪ್ರಯೋಗಗಳನ್ನು ಕೈಗೊಳ್ಳುವ ಮೂಲಕ ಮಣ್ಣಿನ ಪರೀಕ್ಷೆ ಮಾಡಲಾಗುತ್ತದೆ ಎನ್ನುವ ಕಿರಣ್, ‘ಗೆಲಾಕ್ಸಿ’ ಎಂದು ಕರೆಯಲಾಗುವ ಈ ಯಂತ್ರ ಒಂದೆಡೆ ಸತತ ಮೂರು ದಿನ ಕೆಲಸ ಮಾಡಿ ಮಣ್ಣಿನ ಗುಣಮಟ್ಟದ ಕುರಿತಾದ ಫಲಿತಾಂಶ ನೀಡುತ್ತದೆ. ಮಣ್ಣು ಪರೀಕ್ಷೆಗಾಗಿ ಅಗೆಯಲಾಗಿರುವ ರಸ್ತೆಯನ್ನು ಫಲಿತಾಂಶದ ನಂತರ ಮತ್ತೆ ಮೊದಲಿನ ಸ್ಥಿತಿಗೆ ದುರಸ್ತಿಗೊಳಿಸುವುದಾಗಿ ಹೇಳುತ್ತಾರೆ.