ಹುಬ್ಬಳ್ಳಿ: ಕರಡಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಿವಪ್ಪ ಮಳ್ಳಪ್ಪನವರ ಅವರನ್ನು ಕೊಲೆ ಮಾಡಿದ ನೈಜ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಬರುವ ಸೋಮವಾರ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಎದುರು ಧರಣಿ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಶಿವಳ್ಳಿ, ಮಾಜಿ ಸಂಸದ ಮಂಜುನಾಥ್ ಕುನ್ನೂರ, ಪಾಲಿಕೆ ವಿರೋಧ ಪಕ್ಷದ ನಾಯಕ ದೀಪಕ್ ಚಿಂಚೋರೆ ಮತ್ತು ಮುಖಂಡ ಶಿವಾ ನಾಯಕ ಈ ಎಚ್ಚರಿಕೆ ನೀಡಿದರು.
`ಹೆಬ್ಬಳ್ಳಿಯಲ್ಲಿ ಕೆಲವು ತಿಂಗಳ ಹಿಂದೆ ಖಂಡೋಬಾ ಮೋರೆ ಎಂಬ ಕಾಂಗ್ರೆಸ್ ಕಾರ್ಯಕರ್ತನನ್ನು ಕೊಲೆ ಮಾಡಲಾಗಿತ್ತು. ಈಗ ಶಿವಪ್ಪ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇದರಿಂದ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಭಯಗೊಂಡಿದ್ದಾರೆ~ ಎಂದು ಅವರು ಹೇಳಿದರು.
`ಘಟನೆಯಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಸಂಶಯ ಬರುವ ರೀತಿಯಲ್ಲಿ ತನಿಖೆ ನಡೆದಿದೆ.
ಆದ್ದರಿಂದಲೇ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ಸೂಕ್ತ ಸ್ಪಂದನೆ ಸಿಗದಿದ್ದರೆ ರಾಜ್ಯಪಾಲರು ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸುತ್ತೇವೆ~ ಎಂದು ಅವರು ತಿಳಿಸಿದರು.
`ಜಿಲ್ಲೆಯಲ್ಲಿ ಇಂತಹ ಕೊಲೆ ಸಂಸ್ಕೃತಿ ತೀರಾ ಹೊಸದಾಗಿದ್ದು, ನಮಗೆಲ್ಲ ನೋವು ತಂದಿದೆ. ನೈಜ ಆರೋಪಿಗಳು ಪತ್ತೆಯಾದರೆ ಕೊಲೆ ಹಿಂದಿನ ಉದ್ದೇಶ ಬಯಲಾಗಲಿದೆ~ ಎಂದು ಅವರು ಹೇಳಿದರು.