ಹುಬ್ಬಳ್ಳಿ: ‘ಒಗ್ಗಟ್ಟಿನ ಕೊರತೆ ಮತ್ತು ಉದಾಸೀನ ಭಾವದಿಂದಾಗಿ ದೇಶದ ಕೆಲವು ಭಾಗಗಳನ್ನು ಕಳೆದುಕೊಂಡ ನಾವು ಮತ್ತೊಮ್ಮೆ ಇಂಥ ಪ್ರಸಂಗ ಎದುರಾಗಲು ಬಿಡಬಾರದು’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪಕರಾಯಿ ಹೇಳಿದರು.
ವಿಎಚ್ಪಿ ಸ್ವರ್ಣ ಜಯಂತಿ ಅಂಗವಾಗಿ ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಂದ ದೇಶ ವಿಭಜನೆ ಆಗದಂತೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ ಎಂದರು. ‘ನಾವೆಲ್ಲರೂ ಭಾರತೀಯರು.
ನಮ್ಮಲ್ಲಿ ಭೇದ ಇರಬಾರದು. ಭೇದ ಭಾವ ಮೂಡಿದರೆ ಹೊರಗಿನ ಶಕ್ತಿಗಳಿಗೆ ದೇಶದ ಮೇಲೆ ಆಕ್ರಮಣ ಮಾಡಲು ದಾರಿಮಾಡಿಕೊಟ್ಟಂತಾಗುತ್ತದೆ’ ಎಂದು ಹೇಳಿದ ಚಂಪಕರಾಯಿ ‘ಭ್ರಷ್ಟಾಚಾರ ದೇಶಕ್ಕೆ ಅಂಟಿದ ದೊಡ್ಡ ಶಾಪ. ಬೇರೆಯವರ ಹಣ ಮತ್ತು ಸಂಪತ್ತನ್ನು ನಗಣ್ಯ ಮಾಡುವ ಪ್ರವೃತ್ತಿ ಬೆಳೆಯಬೇಕಾಗಿದೆ’ ಎಂದರು.
‘ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯನ್ನು ಉಳಿಸಲು ವಿಶ್ವಹಿಂದೂ ಪರಿಷತ್ ದೊಡ್ಡ ಹೋರಾಟವನ್ನೇ ಹಮ್ಮಿಕೊಂಡು ಯಶಸ್ವಿಯಾಗಿದೆ. ಆದರೆ ಈಗ ಪೂರ್ಣ ಅಯೋಧ್ಯೆ ಹಿಂದೂಗಳಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿದಿದೆ. ಅಯೋಧ್ಯೆ ವಿಷಯದಲ್ಲಿ ಸಮಸ್ತ ಭಾರತೀಯರು ಒಂದಾಗಬೇಕಾಗಿದೆ’ ಎಂದು ಅವರು ಸಲಹೆ ನೀಡಿದರು.
‘ರಾಜ್ಯಭಾರ ಮಾಡುವುದು ರಾಜರ ಕೆಲಸ. ಅವರಿಗೆ ತೆರಿಗೆಯನ್ನು ನೀಡುವುದು ಜನರ ಕರ್ತವ್ಯ. ಆದರೆ ಇಸ್ಲಾಂ ಆಡಳಿತಗಾರರು ಭಾರತದಲ್ಲಿ ಸಾವಿರಾರು ಹಿಂದೂ ದೇವಾಲಯಗಳನ್ನು ಕೆಡವಿದ್ದಾರೆ. ಇದರ ಹಿಂದಿರುವ ಉದ್ದೇಶವೇನೆಂದು ಅರ್ಥವಾಗುತ್ತಿಲ್ಲ. ಬಾಬರ್ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೆಡವಿದ ವಿಷಯ ವೈಜ್ಞಾನಿಕವಾಗಿ ದೃಢಪಟ್ಟಿದೆ. ಇಲ್ಲಿ ಕೊನೆಗೂ ಹಿಂದೂಗಳಿಗೆ ಜಯ ಸಿಕ್ಕಿದೆ’ ಎಂದು ಅವರು ಹೇಳಿದರು.
ವಿಎಚ್ಪಿ ಪ್ರಾಂತ ಉಪಾಧ್ಯಕ್ಷ ರೇವಣಸಿದ್ದಪ್ಪ, ನಗರ ಅಧ್ಯಕ್ಷ ಹಿತೇಶ ಮೋದಿ, ಸಹ ಕಾರ್ಯದರ್ಶಿ ಶಿವಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು.