ಕನಕಪುರ: ‘ವಿದ್ಯಾರ್ಥಿ ಜೀವನ ಸುಖಮಯವಾಗಿ ಕಳೆದು ಸಮಯ ವ್ಯರ್ಥ ಮಾಡಿಕೊಂಡರೆ ಬೆಲೆ ತೆರಬೇಕಾಗುತ್ತದೆ’ ಎಂದು ಬಸವೇಶ್ವರ ಕಾಲೇಜಿನ ಪ್ರಾಂಶುಪಾಲ ರಾಮಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಶನಿವಾರ ನಡೆದ ಕ್ರೀಡೆ, ಸಾಂಸ್ಕೃತಿಕ ಮತ್ತು ಎನ್.ಎಸ್.ಎಸ್ ಕಾರ್ಯಕ್ರಮದ ಸಮಾರಂಭದಲ್ಲಿ ಮಾತನಾಡಿದರು.
‘ಕಾಲೇಜ್ ಲೈಫ್ ಗೋಲ್ಡನ್ ಲೈಫ್ ಎಂದು ಎಷ್ಟೋ ವಿದ್ಯಾರ್ಥಿಗಳು ಜೀವನ ಎಂಜಾಯ್ ಮಾಡುತ್ತಾರೆ. ಆದರೆ, ಅದು ತಪ್ಪು ಎಂದು ಹೇಳುವುದಿಲ್ಲ. ನಿಜವಾಗಿಯೂ ಮುಂದಿನ ಬದುಕು ಬಂಗಾರ ಮಾಡಿಕೊಳ್ಳಬೇಕಾದರೆ ಅದು ಕಾಲೇಜು ದಿನಗಳಲ್ಲೇ ಎಂಬುದನ್ನು ಯಾರೂ ಮರೆಯಬಾರದು’ ಎಂದು ಸಲಹೆ ನೀಡಿದರು.
‘ಮಂಡ್ಯ ಜಿಲ್ಲೆಯ ಪ್ರತಾಪ್ಗೌಡ ಎಂಬ ವಿದ್ಯಾರ್ಥಿ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿದ್ದಾನೆ. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಹೊರಬರಲು ನಾವು ಪ್ರಯತ್ನಿಸಬೇಕು’ ಎಂದು ಹೇಳಿದರು.
‘ವಿದ್ಯಾರ್ಥಿಗಳು ಪಠ್ಯದಲ್ಲಿ 100ಕ್ಕೆ 100 ಅಂಕ ಗಳಿಸುವುದೇ ಬುದ್ಧಿವಂತಿಕೆಯಲ್ಲ. ಪಠ್ಯದಾಜೆಗಿನ ವಿಚಾರ ತಿಳಿದುಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ಅರಿಯಬೇಕು’ ಎಂದು ಹೇಳಿದರು.
ಉಪನ್ಯಾಸಕಿ ಶ್ರೀಶೈಲ ಮಸೂತೆ ಮಾತನಾಡಿ, ‘ಸಮಾಜಕ್ಕೆ ಬೇಕಿರುವುದು ಕೇವಲ ಬುದ್ಧಿವಂತ ಪ್ರತಿಭಾನ್ವಿತರಲ್ಲ. ಜವಾಬ್ದಾರಿಯುತ ಪ್ರಜೆಗಳು. ಅಂತಹ ವ್ಯಕ್ತಿಗಳನ್ನು ನಾವು ರೂಪಿಸಬೇಕಿದೆ. ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ತಿಳಿಸಿದರು.
ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಸವಿತಾ ಅವರು, ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್. ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಪ್ರಾಂಶುಪಾಲ ನಾಗರಾಜು, ಸೌಮ್ಯ ಇದ್ದರು.