ತಿಕೋಟಾ (ವಿಜಯಪುರ): ತಾಲ್ಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಭೂಮಿ ಕಂಪಿಸಿದ ಅನುಭವ ಆಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
15 ದಿನಗಳಿಂದ ದಿನಕ್ಕೆ 3–4 ಬಾರಿ ಭೂಮಿ ಕಂಪಿಸುತ್ತಿದ್ದು, ಭೂಮಿಯಿಂದ ಜೋರು ಶಬ್ದ ಕೇಳಿ ಬಂದಿದೆ. ಎರಡು ವರ್ಷಗಳ ಹಿಂದೆ ಇದೇ ರೀತಿ ಶಬ್ದ ಬರುತ್ತಿತ್ತು. ಹಲವು ಮನೆಗಳು ಬಿರುಕು ಬಿಟ್ಟಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಲಕನದೇವರಹಟ್ಟಿ ಸುತ್ತಲಿನ ಸೋಮದೇವರಹಟ್ಟಿ, ಹುಬನೂರ, ಟಕ್ಕಳಕಿ, ಕಳ್ಳಕವಟಗಿ ಗ್ರಾಮಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದರು. ಎರಡು ವರ್ಷಗಳ ಹಿಂದೆ ಭಯಂಕರ ಶಬ್ದ ಕೇಳಿ ಬಂದಿದ್ದರಿಂದ ಹುಬನೂರ ಸರ್ಕಾರಿ ಶಾಲೆಯಲ್ಲಿ ಭೂಕಂಪನ ಮಾಪನ ಅಳವಡಿಸಲಾಗಿತ್ತು.
ಗಣಿ ಮತ್ತು ಭೂ ವಿಜ್ಞಾನಿಗಳು, ತಿಕೋಟಾ ತಹಶಿಲ್ದಾರ್ ಎಸ್.ಎಂ.ಮ್ಯಾಗೇರಿ ನೇತೃತ್ವದ ತಂಡವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.