ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಹೀಂಖಾನ್‌ಗೆ ‘ಪೂರ್ಣಾವಧಿ ಭಾಗ್ಯ’!

ಮೂರು ವಿಧಾನಸಭಾ ಕ್ಷೇತ್ರಗಳ ವಿಶೇಷ
Last Updated 16 ಮೇ 2018, 10:34 IST
ಅಕ್ಷರ ಗಾತ್ರ

ಬೀದರ್‌: ಎರಡು ಬಾರಿ ಉಪ ಚುನಾವಣೆಗಳಲ್ಲಿ ಮಾತ್ರ ಗೆದ್ದಿದ್ದ ಬೀದರ್ ಶಾಸಕ ರಹೀಂಖಾನ್ ಅವರಿಗೆ ಇದೀಗ ‘ಪೂರ್ಣಾವಧಿ ಭಾಗ್ಯ’ ದೊರೆತಿದೆ.

ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರಿಂದ 2009 ರಲ್ಲಿ ಬೀದರ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಹೀಂಖಾನ್ ಅವರು ಬಿಜೆಪಿಯ ಸೂರ್ಯಕಾಂತ ನಾಗಮಾರಪಳ್ಳಿ ಅವರ ವಿರುದ್ಧ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಏರಿದ್ದರು.

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಅವರ ಎದುರು ಸೋಲು ಅನುಭವಿಸಿದ್ದರು. ಗುರುಪಾದಪ್ಪ ನಾಗಮಾರಪಳ್ಳಿ ಅವರ ಅಕಾಲಿಕ ನಿಧನದಿಂದಾಗಿ 2016 ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಮತ್ತೆ ಜಯಭೇರಿ ಬಾರಿಸಿದ್ದರು. ಈ ಮೂಲಕ ಉಪ ಚುನಾವಣೆಯ ‘ಬಾದ್‌ಶಾಹ’ ಎಂದೇ ಹೆಸರು ಮಾಡಿದ್ದರು.

‘ನನಗೆ ಎರಡು ಬಾರಿ ಅಲ್ಪ ಅವಧಿ ದೊರಕಿದೆ. ಅದರಲ್ಲೇ ಬಹಳ ಕೆಲಸ ಮಾಡಿದ್ದೇನೆ. ಈ ಬಾರಿ ಪೂರ್ಣಾವಧಿ ಸೇವೆಗೆ ಅವಕಾಶ ಕೊಡಬೇಕು’ ಎಂದು ಬಹುತೇಕ ಪ್ರಚಾರ ಸಭೆಗಳಲ್ಲಿ ರಹೀಂಖಾನ್ ಮತದಾರರಲ್ಲಿ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಮತದಾರರು ‘ಪೂರ್ಣಾವಧಿ ಭಾಗ್ಯ’ ನೀಡಿದ್ದಾರೆ.

ನಾರಾಯಣರಾವ್ ‘ಕೈ’ಹಿಡಿದ ಮತದಾರರು

ಬೀದರ್‌: ಹಿಂದುಳಿದ ವರ್ಗಗಳ ನಾಯಕ ಎಂದೇ ಗುರುತಿಸಿಕೊಂಡಿರುವ ಬಿ. ನಾರಾಯಣರಾವ್ ಕೊನೆಗೂ ವಿಧಾನಸಭೆ ಪ್ರವೇಶಿಸಿದ್ದಾರೆ. 40 ವರ್ಷಗಳಿಂದ ರಾಜಕೀಯದಲ್ಲಿರುವ ನಾರಾಯಣರಾವ್ ನಾಲ್ಕನೇ ಯತ್ನದಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಮೂರು ಚುನಾವಣೆಗಳಲ್ಲಿ ಸೋಲು ಅನುಭವಿಸಿದರೂ ಕೈಕಟ್ಟಿ ಕೂರಲಿಲ್ಲ. ಜನರಿಂದ ದೂರವೂ ಸರಿಯಲಿಲ್ಲ. ಕ್ಷೇತ್ರದ ಮತದಾರರ ಕಷ್ಟ ಸುಖಗಳಲ್ಲಿ ಭಾಗಿಯಾದರು. ಅದರ ಫಲಶ್ರುತಿಯಿಂದಾಗಿ ಅವರಿಗೆ ಶಾಸಕ ಸ್ಥಾನ ಒಲಿದು ಬಂದಿದೆ.

ನಾರಾಯಣರಾವ್, ಜಿಲ್ಲೆಯಲ್ಲಿ ಎಸ್‌ಟಿ ಗೊಂಡ ಪ್ರಮಾಣಪತ್ರಕ್ಕಾಗಿ ನಡೆದ ಹೋರಾಟದ ನೇತೃತ್ವ ವಹಿಸಿದ್ದರು. ನಿರಂತರ ಹೋರಾಟದ ಮೂಲಕ ಅದರಲ್ಲಿ ಯಶಸ್ಸನ್ನೂ ಗಳಿಸಿದ್ದರು. ಎಸ್‌ಟಿ ಗೊಂಡ ಪ್ರಮಾಣ ಪತ್ರದಿಂದಾಗಿ ಗೊಂಡ ಸಮುದಾಯದ ಸಾವಿರಾರು ಅಭ್ಯರ್ಥಿಗಳು ಸರ್ಕಾರದ ವಿವಿಧ ಹುದ್ದೆಗಳಲ್ಲಿ ನೇಮಕಗೊಂಡಿದ್ದಾರೆ. ಶಿಕ್ಷಣದಲ್ಲಿಯೂ ಗೊಂಡ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಅವರನ್ನು ಬಲ್ಲವರು ಸ್ಮರಿಸುತ್ತಾರೆ.

ಶಾಸಕ ಅಶೋಕ ಖೇಣಿಗೆ ಸೋಲು

ಬೀದರ್‌: ಜಿಲ್ಲೆಯ ಹಾಲಿ ಶಾಸಕರ ಪೈಕಿಯಲ್ಲಿ ಒಬ್ಬರಾದ ಅಶೋಕ ಖೇಣಿ ಅವರಿಗೆ ಸೋಲು ಆಗಿದೆ. ಬೀದರ್ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಖೇಣಿ ಅವರು ಎರಡನೇ ಬಾರಿಗೆ ಆಯ್ಕೆ ಬಯಸಿದ್ದರು. ಆದರೆ, ಮತದಾರರು ಅವರ ಮೇಲೆ ಕೃಪೆ ತೋರಲಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಬೀದರ್ ದಕ್ಷಿಣ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಮತದಾರರು ಬಂಡೆಪ್ಪ ಕಾಶೆಂಪುರ ಅವರನ್ನು ಗೆಲ್ಲಿಸಿದ್ದರು. ಎರಡನೇ ಚುನಾವಣೆಯಲ್ಲಿ ಅಶೋಕ ಖೇಣಿ ಅವರಿಗೆ ಅವಕಾಶ ನೀಡಿದ್ದರು. ಇದೀಗ ಮೂರನೇ ಚುನಾವಣೆಯಲ್ಲಿ ಮತ್ತೆ ಬಂಡೆಪ್ಪ ಕಾಶೆಂಪುರ ಅವರಿಗೆ ಮಣೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT