ಶಿರಹಟ್ಟಿ: ಭೂ ಒಡೆತನ ಯೋಜನೆ ಅಡಿಯಲ್ಲಿ ಜಮೀನು ಪಡೆಯಲು ಎಸ್ಸಿ, ಎಸ್ಟಿ ಕಾರ್ಪೋರೇಷನ್ಗೆ ಅರ್ಜಿ ಸಲ್ಲಿಸಲು ಪಿಟಿಸಿಎಲ್ ಸೀಟ್ ಕೇಳಲು ಹೋದಾಗ ಜಾತಿ ನಿಂದನೆ ಮಾಡಿ ಅವಮಾನಿಸಲಾಗಿದೆ. ತಕ್ಷಣ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ತಾಲ್ಲೂಕಿನ ಛಬ್ಬಿ ಗ್ರಾಮದ ಗ್ರಾಮಸ್ಥರು ತಹಶೀಲ್ದಾರ್ ಅನಿಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡ ಜಾನು ಲಮಾಣಿ ಮಾತನಾಡಿ, ಸರ್ಕಾರ ಎಸ್ಸಿ, ಎಸ್ಟಿ ಸಮುದಾಯದವರ ಅಭಿವೃದ್ದಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ನೀಡುತ್ತಿದೆ. ಜಮೀನು ಇಲ್ಲದ ಜನರಿಗೆ ಎಸ್ಸಿ, ಎಸ್ಟಿ ಕಾರ್ಪೋರೇಷನ್ ವತಿಯಿಂದ ಭೂಮಿ ಮಂಜೂರು ಮಾಡುತ್ತಿದ್ದು, ಅರ್ಜಿ ಸಲ್ಲಿಸಲು ಪಿಟಿಸಿಎಲ್ ಪೈಲ್ ಕುರಿತು ಮಾಹಿತಿ ಕೇಳಲು ಹೋದಾಗ ಅವಮಾನಿಸಲಾಗಿದೆ. ಎಸ್ಸಿ ಮೀಸಲು ಕ್ಷೇತ್ರದಲ್ಲಿಯೇ ನಮಗೆ ರಕ್ಷಣೆ ಇಲ್ಲದಂತಾಗಿದ್ದು, ಸರ್ಕಾರದ ಸೌಲಭ್ಯ ಪಡೆಯಲು ಪೂರಕ ದಾಖಲೆ ಜೋಡಣೆ ಮಾಡಿಕೊಳ್ಳಲು ಮಾಹಿತಿ ಕೇಳಲು ಹೋಗಿದ್ದೇವು. ಅಲ್ಲಿನ ಪ್ರಬಾರಿ ಕಂದಾಯ ನಿರೀಕ್ಷಕ ಬಿ.ಪಿ. ಗೊರೇಖಾನ ಅವರು ನಮಗೆ ಯಾವುದೇ ಮಾಹಿತಿ ನೀಡದೆ ಹಿಯಾಳಿಸಿದ್ದಾರೆ’ ಎಂದು ದೂರಿದರು.
ಪ್ರಬಾರಿ ಕಂದಾಯ ನಿರೀಕ್ಷಕರ ನಡೆ ಕಚೇರಿಗೆ ಬರುವ ಸಾರ್ವಜನಿಕರಿಗೆ ಬೇಸರ ತರಿಸುತ್ತಿದ್ದು, ಕೂಡಲೇ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಕೈಗೋಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.