ಮುಂಡರಗಿ: ರೈತರು ಹಾಗೂ ಸೈನಿಕರು ದೇಶದ ಎರಡು ಕಣ್ಣುಗಳಾಗಿದ್ದು, ರೈತ ದೇಶದ ಜನತೆಗೆ ಅನ್ನಹಾಕಿ ಸಲಹುತ್ತಾನೆ ಮತ್ತು ಸೈನಿಕ ದೇಶದ ಗಡಿಯಲ್ಲಿ ನಿಂತು ನಮ್ಮ ದೇಶ ಮತ್ತು ನಮ್ಮ ಜನರನ್ನು ಕಾಪಾಡುತ್ತಾರೆ. ಆದ್ದರಿಂದ ನಮ್ಮ ಸರ್ಕಾರಗಳು ರೈತರು ಹಾಗೂ ಸೈನಿಕರಿಗೆ ಯಾವ ತೊಂದೆಯೂ ಆಗದಂತೆ ನೋಡಿ ಕೊಳ್ಳಬೇಕು ಎಂದು ನಿವೃತ್ತ ಸೈನಿಕ ಹನುಮಂತಪ್ಪ ಸಿರಬಡಗಿ ಹೇಳಿದರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿ ಬುಧವಾರ ಕರವೇ ಹಾಗೂ ಸ್ಥಳೀಯ ವಿವಿಧ ಯುವ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಇಂದಿನ ವಿದ್ಯಾವಂತ ಯುವಕರು ಕೇವಲ ಐ.ಟಿ, ಬಿ.ಟಿಯಂತಹ ಉದ್ಯೋಗಗಳನ್ನು ಮಾತ್ರ ಇಷ್ಟ ಪಡುತ್ತಿದ್ದಾರೆ. ದೇಶ ಸೇವೆ ಹಾಗೂ ಸಮಾಜ ಸೇವೆಗಳಿಂದ ದೂರವಿದ್ದಾರೆ. ಜನ್ಮ ನೀಡಿದ ತಾಯಿ ಹಾಗೂ ನಮ್ಮ ಜನ್ಮ ಭೂಮಿ ತುಂಬಾ ಶ್ರೇಷ್ಠವಾಗಿದ್ದು, ಅವುಗಳ ರಕ್ಷಣೆಗೆ ಹಾಗೂ ಸೇವೆಗೆ ಯುವಕರು ಮುಂದೆ ಬರಬೇಕು. ಯುವ ಸಮುದಾಯವು ಸೈನ್ಯ ಸೇರಿ ದೇಶ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ನಬಿಸಾಬ್ ಕೆಲೂರ, ಕರವೇ ಮುಖಂಡ ರಾಜಾಬಕ್ಷಿ ಬೆಟಗೇರಿ, ಯುವ ಮುಖಂಡರಾದ ದೇವರಾಜ ಹಡಪದ, ನಾಗರಾಜ ಗುಡಿಮನಿ, ಇಲ್ಮಾಯಿಲ್ ಬಿಜಾಪುರ, ಸಂತೋಷ ಹಿರೇಮನಿ, ಪ್ರಕಾಶ, ವಿಶಾಲ, ಆನಂದ, ರಫಿಕ್, ಮಹಾಂತೇಶ, ಅಮೀರ, ಸಲೀಮ್, ಆಸಿಫ್ ಹಾಜರಿದ್ದರು.