ಲಕ್ಷ್ಮೇಶ್ವರ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ ಬುಧವಾರ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ವಿಜ್ಞಾನ ಮೇಳ ಉದ್ಘಾಟಿಸಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಈಚೆಗೆ ಶಿಕ್ಷಣದ ಗುಣಮಟ್ಟ ಕಡಿಮೆ ಆಗುತ್ತಿರುವುದು ವಿಷಾದನೀಯ.
ಖಾಸಗಿ ಶಾಲೆಗಳಿಗೆ ಹೋಲಿಸಿದಾಗ ಸರ್ಕಾರಿ ಶಾಲೆಗಳಲ್ಲಿಯೇ ಉತ್ತಮ ಪದವಿ ಪಡೆದ ಶಿಕ್ಷಕರು ಇರುತ್ತಾರೆ. ಆದರೆ ಪರೀಕ್ಷಾ ಫಲಿತಾಂಶ ಮಾತ್ರ ಶೂನ್ಯದತ್ತ ಸಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಇಲಾಖೆಯ ಹಿರಿಯ ಅಧಿಕಾರಿಗಳು ಚಿಂತನೆ ನಡೆಸಬೇಕಾದ ಅಗತ್ಯ ಇದೆ ಎಂದರು.
ಜಿಲ್ಲಾ ಅಕ್ಷರದಾಸೋಹದ ಶಿಕ್ಷಣಾಧಿ ಕಾರಿ ಮಂಗಳಾ ತಾಪಸ್ಕರ ಗಣಿತ ಮೇಳಕ್ಕೆ ಚಾಲನೆ ನೀಡಿ ಮಗುವಿನಲ್ಲಿನ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕ ಪ್ರೋತ್ಸಾಹ ನೀಡುವ ಕೆಲಸ ನಡೆಯಬೇಕಿದೆ. ಆಧುನಿಕ ತಂತ್ರಜ್ಞಾನದ ಪರಿಕರಗಳೊಂದಿಗೆ ಬೆಳೆಯುತ್ತಿರುವ ಮಕ್ಕಳಲ್ಲಿ ಪ್ರತಿಭೆ ಮತ್ತಷ್ಟು ದ್ವಿಗುಣಗೊಂಡಿದೆ. ಕಾರಣ ಶಿಕ್ಷಕರೂ ಸಹ ಶಿಕ್ಷಣ ರಂಗದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಸೌಲಭ್ಯಗಳನ್ನು ಎಲ್ಲ ಶಾಲೆಗಳಿಗೆ ನೀಡುತ್ತಿದ್ದು ಇದರ ಉಪಯೋಗ ಮಕ್ಕಳಿಗೆ ಸಿಗಬೇಕು ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ಎಂ.ಆರ್. ಪಾಟೀಲ, ಮಹೇಶ ಹೊಗೆಸೊಪ್ಪಿನ, ಅಪರಾಧಿ ವಿಭಾಗದ ಪಿಎಸ್ಆಯ್ ಬಿ.ಬಿ.ಕೊಳ್ಳಿ, ಬಿ.ಎಸ್. ಹರ್ಲಾಪುರ, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕ ಸಿಬ್ಬಂದಿ ಇದ್ದರು. ಮುಖ್ಯ ಶಿಕ್ಷಕಿ ಡಿ.ಎಫ್. ಪಾಟೀಲ ಸ್ವಾಗತಿಸಿದರು.