ಗದಗ: ‘ರಾಜ್ಯದಲ್ಲಿ 1987ರ ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ (ಸಾಮಾನ್ಯ ವರ್ಗ) ಪ್ರಾರಂಭವಾದ 87ಕ್ಕೂ ಹೆಚ್ಚು ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಭರವಸೆ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿ ನ. 8 ಅಥವಾ 9ರಂದು ಸಂಪುಟ ಉಪಸಮಿತಿ ಸಭೆ ಕರೆಯಲು ಅವರು ಸೂಚಿಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.
‘ಕಳೆದ 3 ದಶಕಗಳಿಂದ ಈ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯದೆ ಬಡ ಹಾಗೂ ಮಧ್ಯಮ ವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿವೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೂ ಸರಿಯಾಗಿ ವೇತನ ಲಭಿಸುತ್ತಿಲ್ಲ. ಈ ಕಾಲೇಜುಗಳನ್ನು ಕೂಡಲೇ ಅನುದಾನಕ್ಕೆ ಒಳಪಡಿಸಬೇಕು’ ಎಂದು ಸಂಕನೂರು ಆಗ್ರಹಿಸಿದ್ದಾರೆ.
1987ರಿಂದ 1995ರವರೆಗೆ ಎಸ್.ಸಿ, ಎಸ್.ಟಿ ಆಡಳಿತ ಮಂಡಳಿಗಳಿಂದ ಪ್ರಾರಂಭವಾಗಿರುವ ಪ್ರಥಮ ದರ್ಜೆ ಕಾಲೇಜುಗಳನ್ನು ಸರ್ಕಾರ ಈಗಾಗಲೇ ಅನುದಾನಕ್ಕೆ ಒಳಪಡಿಸಿದೆ. ಅದರಂತೆ ಸಾಮಾನ್ಯ ಆಡಳಿತ ಮಂಡಳಿಯ ಕಾಲೇಜುಗಳನ್ನೂ ಅನುದಾನಕ್ಕೆ ಒಳಪಡಿಸಿ, ತಾರತಮ್ಯ ನಿವಾರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.