ಶಿವಮೊಗ್ಗ: ಇಂದು ಶುಭ ಶುಕ್ರವಾರ. ಯೇಸುಕ್ರಿಸ್ತ ಶಿಲುಬೆಗೆ ಏರಿದ ದಿನ. ಕ್ರೈಸ್ತ ಸಮುದಾಯಕ್ಕೆ ಪರಮ ಪವಿತ್ರ ದಿನ. ಕೊರೊನಾ ನಿರ್ಬಂಧದ ಕಾರಣ ಶಿವಮೊಗ್ಗದಲ್ಲೂ ಕ್ರೈಸ್ತ ಸಮುದಾಯದ ಜನರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.
ನಗರದ ಸೇಕ್ರೇಡ್ ಹಾರ್ಟ್ ಚರ್ಚ್ನಲ್ಲಿ ಏಕೈಕ ಗುರುಗಳು ಮಧ್ಯಾಹ್ನ 3ಕ್ಕೆ ಪ್ರಾರ್ಥನೆ ಆರಂಭಿಸಿದರು. ಆನ್ಲೈನ್ ಮೂಲಕ ಈ ಪ್ರಾರ್ಥನೆಯ ವೀಡಿಯೊಗಳನ್ನು ಎಲ್ಲ ಕ್ರೈಸ್ತರು ನೋಡಿ ಭಕ್ತಿಯಿಂದ ಎರಡು ಗಂಟೆ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲೆಯಾದ್ಯಂತ ಅವರ ಮನೆಗಳಲ್ಲೇ ಏಕಕಾಲದಲ್ಲಿ ಈ ಪ್ರಾರ್ಥನೆ ನಡೆದದ್ದು ಇಂದಿನ ವಿಶೇಷ. ಹೊಸ ಬಟ್ಟೆಗಳನ್ನು ಧರಿಸಿ, ಚರ್ಚ್ಗೆ ಭೇಟಿ ನೀಡಿ ಹಬ್ಬ ಆಚರಿಸುತ್ತಿದ್ದ ರೀತಿಯಲ್ಲೇ ಎಲ್ಲರೂ ತಮ್ಮತಮ್ಮ ಮನೆಗಳಲ್ಲೇ ಜಬ್ಬ ಆಚರಿಸಬೇಕು ಎಂದು ಶಿವಮೊಗ್ಗ ಧರ್ಮಾಧ್ಯಕ್ಷರು ಸೂಚನೆ ನೀಡಿದ್ದರು.
ಸುಮಾರು 100 ವರ್ಷಗಳ ನಂತರ ದೇವಾಲಯದ ಮಹಾದ್ವಾರ ಮುಚ್ಚಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದು ಇದೇ ಮೊದಲು ಎಂದು ಶತಮಾನದ ಹೊಸ್ತಿಲಲ್ಲಿ ಇರುವ ಹಿರಿಯರು ಸ್ಮರಿಸಿದರು. 100 ವರ್ಷಗಳ ಹಿಂದೆ ಸ್ಪಾನಿಷ್ ಫ್ಲೂ ಬಂದಾಗ ದೇವಾಲಯಗಳನ್ನು ಮುಚ್ಚಲಾಗಿತ್ತು. ದೇಶದ ಜನರನ್ನು ಕೊರೊನಾವೈರಸ್ನಿಂದ ಬಾಧಿತರಾಗದಂತೆ ಹಾಗೂ ಸೋಂಕಿತರನ್ನು ಬೇಗ ಗುಣಮುಖರಾಗಿಸುವಂತೆ ಪ್ರಾರ್ಥಿಸಲಾಯಿತು.
ಫೆ. 26ರಿಂದ ಉಪವಾಸ ವ್ರತ ನಡೆಸುತ್ತಾ ಬಂದಿದ್ದ ಕ್ರೈಸ್ತ ಸಮುದಾಯದವರು ಶುಕ್ರವಾರ ಉಪವಾಸ ಅಂತ್ಯಗೊಳಿಸಿದರು.