ಹಾಸನ : ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಕ್ವಿಂಟಲ್ ಗೆ ₹ 2300 ದರ ನಿಗದಿ ಪಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
2017–18ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಗಳನ್ನು ಹಾಸನ, ಬೇಲೂರು, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆಯ ಗಂಡಸಿ ಮತ್ತು ಜಾವಗಲ್, ಆಲೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಗಳಲ್ಲಿ ತೆರೆಯಲಾಗಿದೆ ಎಂದು ಪೂರ್ಣಿಮಾ ತಿಳಿಸಿದರು.
ರಾಗಿ ಖರೀದಿಗೆ ಜ. 12ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ರಜೆ ದಿನ ಹೊರತು ಪಡಿಸಿ ಉಳಿದ ದಿನ ಖರೀದಿಗೆ ಅವಕಾಶವಿರುತ್ತದೆ. ನೋಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್, ಆರ್.ಟಿ.ಸಿ ಬೆಳೆ ನಮೂದು, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು. ಆರ್.ಟಿ.ಸಿ ಯಲ್ಲಿ ಬೆಳೆ ನಮೂದು ನೋಂದಣಿ ಆಗದೆ ಇದ್ದ ಪಕ್ಷದಲ್ಲಿ ಬೆಳೆ ದೃಢೀಕರಣ ಪತ್ರವನ್ನು ಲಗತ್ತಿಸಬಹುದಾಗಿದೆ ಎಂದು ಹೇಳಿದರು.
ರಾಗಿ ತೂಕ ಮಾಡಲು ವಿದ್ಯುನ್ಮಾನ ತೂಕದ ಯಂತ್ರ ಕಡ್ಡಾಯವಾಗಿ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಬ್ಯಾನರ್ ಮತ್ತು ಕರಪತ್ರಗಳ ಮೂಲಕ ರೈತರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ರಾಗಿ ಖರೀದಿಸಲು ಬರುವ ರೈತರಿಂದ ಯಾವುದೇ ದೂರುಗಳು ಬರದಂತೆ ನಿಗಾವಹಿಸಿಸಬೇಕು. ರಾಗಿ ದಾಸ್ತಾನು ಮಾಡುವ ಉಗ್ರಾಣಗಳು ಸುವ್ಯವಸ್ಥಿತವಾಗಿರುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಂಟಿ ಕೃಷಿ ನಿರ್ದೇಶಕ ರಾಮಚಂದ್ರಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶ್ರೀಕಂಠ ಮೂರ್ತಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವ್ಯವಸ್ಥಾಪಕರಾದ ರಂಗಸ್ವಾಮಿ, ಪುಟ್ಟಸ್ವಾಮಿ ಇದ್ದರು.