ನುಗ್ಗೇಹಳ್ಳಿ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ನುಗ್ಗೇಹಳ್ಳಿ ಹೋಬಳಿ ರಾಯಸಮುದ್ರ ಕಾವಲಿನ ಅಮೃತ್ ಮಹಲ್ ತಳಿ ಸಂವರ್ಧನಾ ಉಪ ಕೇಂದ್ರದಲ್ಲಿರುವ ಶೆಡ್ ಕೆಸರಿನ ಗದ್ದೆಯಂತಾಗಿದ್ದು, ಜಾನುವಾರುಗಳು ತೊಂದರೆ ಅನುಭವಿಸಿದ ದೃಶ್ಯ ಭಾನುವಾರ ಕಂಡು ಬಂತು.
ಕೆಲ ದಿನಗಳಿಂದ ಮಳೆ ಬಿದ್ದಿದ್ದು, ಶೆಡ್ ತಗ್ಗು ಪ್ರದೇಶದಲ್ಲಿ ಗೇಟ್ ಮೂಲಕ ನೀರು ಶೆಡ್ಗೆ ನುಗ್ಗಿದೆ. ಅಲ್ಲದೇ ಶೆಡ್ನ ಅರ್ಧ ಭಾಗಕ್ಕೆ ಚಾವಣಿ ಇಲ್ಲದಿರುವುದರಿಂದ ಸಾಕಷ್ಟು ನೀರು ಬಂದಿದೆ. ಶೆಡ್ನಲ್ಲಿದ್ದ ಸಗಣಿಯೊಂದಿಗೆ ನೀರು ಬೆರೆತು ಸಂಪೂರ್ಣ ಕೆಸರುಮಯವಾಗಿದೆ. ಹೀಗಾಗಿ 230 ರಾಸುಗಳು ಮೂರ್ನಾಲ್ಕು ದಿನಗಳಿಂದ ಕೆಸರಿನಲ್ಲಿ ಸಿಲುಕಿವೆ. ಆದರೆ ಮೇವು ಮತ್ತು ಕುಡಿಯುವ ನೀರಿಗೆ ತೊಂದರೆಯಾಗಿಲ್ಲ.
ಉಪ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ 7 ಜನ ಸಿಬ್ಬಂದಿ ಇದ್ದು, ಇವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಎರಡು ವರ್ಷದ ಹಿಂದೆ ಕೆಲ ರಾಸುಗಳು ನಿತ್ರಾಣಗೊಂಡು ಮೃತಪಟ್ಟಿದ್ದವು ಎಂದು ಜನತೆ ದೂರಿದರು.
ಕೆಸರಿನಲ್ಲಿಯೇ ನಿಂತ ಜಾನುವಾರುಗಳು ಸೊರಗುತ್ತಿವೆ. ಕರುಗಳು ನಿಂತಲ್ಲೇ ಕಣ್ಣೀರಿಡುತ್ತಿರುವ ದೃಶ್ಯ ಕಂಡು ಬಂತು. ಜಾನುವಾರುಗಳು ಮೈಗೆ ಕೆಸರು ಮೆತ್ತಿಕೊಂಡಿದೆ. ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸುರಕ್ಷತೆಯ ದೃಷ್ಟಿಯಿಂದ ಭಾನುವಾರ ಬೆಳಿಗ್ಗೆ 230 ರಾಸುಗಳನ್ನು ಅರಸೀಕೆರೆ ತಾಲ್ಲೂಕು ಬಿದರೆ ಕಾವಲಿಗೆ ಸ್ಥಳಾಂತರಿಸಿದ್ದಾರೆ.
ಸ್ಥಳಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾಧಿಕಾರಿ ಆರ್. ಗಿರೀಶ್, ಪಶುಪಾಲನಾ ಇಲಾಖೆಯ ಆಯುಕ್ತ ನಟೇಶ್, ಉಪನಿದರ್ೇಶಕಿ ಡಾ. ಜಾನಕಿ, ತಹಶೀಲ್ದಾರ್ ಜೆ.ಬಿ.ಮಾರುತಿ, ಪಶುಪಾಲನಾ ಇಲಾಖೆಯ ಸಹಾಯಕ ನಿದರ್ೇಶಕ ವಿ. ಕೃಷ್ಣಮೂರ್ತಿ ಇತರರು ಭೇಟಿ ನೀಡಿ ಪರಿಶೀಲಿಸಿದರು.
‘ಮೇವು, ಕುಡಿಯುವ ನೀರಿಗೆ ತೊಂದರೆ ಇಲ್ಲಾ. ಸದ್ಯ 230 ರಾಸುಗಳನ್ನು ಅರಸೀಕೆರೆ ತಾಲ್ಲೂಕು ಬಿದರೆ ಕಾವಲಿಗೆ ಸ್ಥಳಾಂತರಿಸಲಾಗಿದೆ. ರಾಯಸಮುದ್ರದಲ್ಲಿರುವ ಶೆಡ್ ಗೆ ಫ್ಲೋರಿಂಗ್ ಹಾಗು ಉಳಿದ ಭಾಗಕ್ಕೆ ಮೇಲ್ಛಾವಣೆ ನಿಮರ್ಿಸಿದ ಬಳಿಕ ರಾಸುಗಳನ್ನು ಪುನಃ ಇಲ್ಲಿಗೆ ಕರೆತರಲಾಗುವುದು’ ಎಂದು ಚನ್ನರಾಯಪಟ್ಟಣದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ವಿ. ಕೃಷ್ಣಮೂರ್ತಿ ಹೇಳಿದರು.