ಹಾಸನ: ‘ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲಾ ಮತ್ತುತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು,ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಘೋಷಿಸಲಾಗುವುದು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಹಾಸನ ಸಂಸದರ ನಿವಾಸದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಪ್ಪ ಮಕ್ಕಳ ಪಕ್ಷ ಎಂಬ ತಪ್ಪು ಗ್ರಹಿಕೆ ಬೇಡ. ಜೆಡಿಎಸ್ನಲ್ಲಿದ್ದವರು ಸಾಕಷ್ಟು ಮಂದಿ ಕಾಂಗ್ರೆಸ್, ಬಿಜೆಪಿಯಲ್ಲಿ ಇದ್ದಾರೆ. 2023ಕ್ಕೆ ಅವರೆಲ್ಲರೂ ವಾಪಸ್ ಬರುವ ಸಾಧ್ಯತೆ ಇದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ಭಾನುವಾರದಿಂದಲೇ ವಿಧಾನಸಭಾ ಕ್ಷೇತ್ರದ ಪ್ರವಾಸ ಆರಂಭಿ ಸಲಾಗುವುದು. ಮೊದಲಿಗೆ ಬೇಲೂರು, ಆಲೂರಿನಲ್ಲಿಕಾರ್ಯಕರ್ತರ ಸಭೆ ನಡೆಸಿ, ಗೌಡರಿಗೆ ಕಳುಹಿಸಲಾಗುವುದು. ರಾಜಕೀಯ ದುರದ್ದೇಶದಿಂದ ಹಲವುಗ್ರಾಮ ಪಂಚಾಯಿತಿಗಳ ಚುನಾವಣೆಯನ್ನೇ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ವಿಧಾಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಶಾಸಕ ಪ್ರೀತಂ ಗೌಡ ನೀಡಿರುವ ಆಹ್ವಾನಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಾಸನ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ. ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿಗೆಲ್ಲಿಸಿಕೊಂಡು ಬರದಿದ್ದರೆ ನನ್ನನ್ನು ರೇವಣ್ಣ ಎಂದು ಕರೆಯಬೇಡಿ’ ಎಂದರು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ದೇವೇಗೌಡರು ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಕೆಲಸ. ಕಳೆದ ಬಾರಿಯಂತೆ ಈ ಬಾರಿ ತಪ್ಪು ಆಗದಂತೆ ನೋಡಿಕೊಳ್ಳಲಾಗುವುದು. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಭರವಸೆ ನೀಡಿದರು.
ಮುಖಂಡ ಅಗಿಲೆ ಯೋಗೇಶ್ ಮಾತನಾಡಿ, ‘ರೈತರ ಸಮಸ್ಯೆಗೆ ಧ್ವನಿ ಎತ್ತುತ್ತಿದ್ದವರು ಗೌಡರು. ಮುಂದಿನಪೀಳಿಗೆ ಮಹಾತ್ಮ ಗಾಂಧಿಯವರ ಗೌಡರನ್ನು ರೀತಿ ನೆನಪಿಸಿಕೊಳ್ಳುತ್ತಾರೆ. ದೇಶ ಕಂಡ ಕಳಂಕ ರಹಿತ ಗೌಡರು. ಸೊಸೆ ಎನ್ನುವುದು ಮರೆತು ಭವಾನಿಗೆ ಟಿಕೆಟ್ ನೀಡಿ. ಒಳ್ಳೆ ನಾಯಕಿಯಾಗುವ ಶಕ್ತಿ ಇದೆಎಂದರು.
ವಕೀಲರಾದ ಸುಮಾ ಮಾತನಾಡಿ, ‘ಸೊಸೆ ಎಂಬ ಒಂದೇ ಕಾರಣಕ್ಕೆ ಹೊರಗೆ ಬಿಡದಿದ್ದರೆ ಮಹಿಳೆಯರಕಾಪಾಡೋದು ಯಾರು. ಭವಾನಿ ಅವರೊಬ್ಬರೇ ಜಿಲ್ಲೆಯ ಏಕೈಕ ಮಹಿಳಾ ನಾಯಕಿ. ಹಾಸನ ಶಾಸಕರಎದುರಿಗೆ ಭವಾನಿ ಅವರನ್ನು ನಿಲ್ಲಿಸುವ ಬಯಕೆ ಇತ್ತು. ಆದರೆ, ಸಂದರ್ಭಕ್ಕೆ ಅನುಸಾರ ವಿಧಾನ ಪರಿಷತ್ಗೆಟಿಕೆಟ್ ನೀಡಬೇಕು’ ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಶಂಕರ್ ಮಾತನಾಡಿ, ಯುವ ನಾಯಕ ಡಾ.ಸೂರಜ್ ರೇವಣ್ಣ ಅವರಿಗೆ ಟಿಕೆಟ್ನೀಡಬೇಕು ಎಂದು ಸಲಹೆ ನೀಡಿದರು.
ಮುಖಂಡರಾದ ಸೈಯದ್ ಅಕ್ಬರ್, ಇಂದಿರಾ ಧರ್ಮಪ್ಪ, ಎಚ್.ಪಿ.ಸ್ವರೂಪ್, ನಾಗಮ್ಮ, ಮಂಜೇಗೌಡ,ಕರೀಗೌಡ, ಜಗನ್ನಾಥ್, ರಾಜೇಗೌಡ, ರಾಜಶೇಖರ್, ಎಸ್.ದ್ಯಾವೇಗೌಡ, ಸೋಮನಹಳ್ಳಿ ನಾಗರಾಜ್, ಎಚ್.ಕೆ.ಕುಮಾರಸ್ವಾಮಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.