ಹಾಸನ: ‘ತ್ರಿಪುರಾದಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ನಡೆಸಿರುವ ದಾಳಿ ಅಮಾನವೀಯವಾದದ್ದು, ದೌರ್ಜನ್ಯ ಎಸಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಬಂದು ಘೋಷಣೆ ಕೂಗಿದರು.
’ತ್ರಿಪುರಾದ ವಿವಿಧ ಭಾಗಗಳಲ್ಲಿ ಮಸೀದಿಗಳು ಮತ್ತು ಮುಸ್ಲಿಂ ಸಮುದಾಯದವರ ಆಸ್ತಿಗಳ ಮೇಲೆ ಹಿಂದೂ ಸಂಘಟನೆಗಳು ನಡೆಸಿರುವ ದಾಳಿ ಖಂಡನೀಯ. ಆರ್.ಎಸ್.ಎಸ್, ವಿ.ಎಚ್.ಪಿ ಮತ್ತು ಬಜರಂಗ ದಳಗಳು ಈಶಾನ್ಯ ಪ್ರದೇಶದ ಮುಸ್ಲಿಂರನ್ನು ಬಂಗ್ಲಾದೇಶಿ ನುಸುಳುಕೋರರು ಎಂಬ ಸುಳ್ಳು ಆರೋಪ ಹೊರಿಸಿ ಮಸೀದಿಗಳಿಗೆ ಬೆಂಕಿ ಇಟ್ಟು, ಆಸ್ತಿ - ಪಾಸ್ತಿಗಳಿಗೆ ನಷ್ಟ ಉಂಟು ಮಾಡಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
’ಕೂಡಲೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ರಾಷ್ಟ್ರಪತಿ ಸೂಚನೆ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಜಿಲ್ಲಾ ಅಧ್ಯಕ್ಷ ಸೂಫಿ ಇಬ್ರಾಹಿಂ, ವಸೀಮ್, ಸಿದ್ದಿಬ್ ಆನೆಮಹಲ್, ಫೈರೋಜ್ ಪಾಷಾ, ಸೈಯದ್ ಫರೀದ್, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶೀರ್ ಅಹಮದ್, ಸರ್ದಾರ್ ಪಾಷಾ ಇದ್ದರು.