ಹಾಸನ: ‘ಸ್ವಚ್ಛತೆ ವಿಚಾರದಲ್ಲಿ ರಾಜಿ ಆಗದಿರಿ. ಸುತ್ತಲ ಪರಿಸರ ಸ್ವಚ್ಛವಾಗಿಡಲು ಶ್ರಮಿಸಿ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆಯ ಜಂಟಿ ಕಾರ್ಯದರ್ಶಿ ಕಾಂಚನಮಾಲ ಅಭಿಪ್ರಾಯಪಟ್ಟರು.
ಕಾಟೀಹಳ್ಳಿ ಬಳಿ ಪೊಲೀಸ್ ವಸತಿ ಗೃಹದ ಸುತ್ತಮುತ್ತಲ ಖಾಲಿ ಜಾಗದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಪಾರ್ಥೇನಿಯಂ, ಇತರೆ ಗಿಡಗಂಟಿ, ತ್ಯಾಜ್ಯ ಸ್ವಚ್ಛಗೊಳಿಸಿದ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಮನೆ ಸ್ವಚ್ಛತೆಜೊತೆಗೆ ವಾತಾವರಣದ ಸ್ವಚ್ಛತೆಯೂ ಅಗತ್ಯ. ಸ್ವಚ್ಛತೆಗೆ ಎಲ್ಲರೂ ಕೈಜೋಡಿಸಬೇಕು. ವಿಶಾಲ ಜಾಗವನ್ನು ಸ್ವಚ್ಛ ಮಾಡಿಕೊಂಡರೆ ಮಕ್ಕಳಿಗೆ ಆಟ, ವಾಯುವಿಹಾರಕ್ಕೆ ಅನುಕೂಲ’ ಎಂದರು.
ನೇತ್ರ ತಜ್ಞ ರಾಜೇಶ್ ಅವರು, ‘ಇತ್ತೀಚಿನ ದಿನಗಳಲ್ಲಿ ಸಾಂಕ್ರಮಿಕ ಕಾಯಿಲೆಗಳು ಹೆಚ್ಚಲು ಅಸ್ವಚ್ಚತೆಯೇ ಕಾರಣ. ನಿತ್ಯನಾವು ಸ್ವಚ್ಛವಾದಂತೆ ಪರಿಸರವನ್ನು ಸ್ವಚ್ಛವಾಗಿ ಇಡಬೇಕು ಎಂದು ಹೇಳಿದರು.
ಏಕಲವ್ಯ ಒಪನ್ ಗ್ರೂಪ್ ಮುಖ್ಯಸ್ಥ ಆರ್.ಜೆ.ಗಿರೀಶ್ ಅವರು, ‘ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ಜಿಲ್ಲೆಯ ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಕೊಡುಗೆ ನೀಡುತ್ತಿದ್ದಾರೆ’ ಎಂದರು.
‘ಒಬ್ಬರ ಶ್ರಮದಿಂದ ಎಲ್ಲವೂ ಸಾಧ್ಯ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಶ್ರಮ ದಾನ ಮಾಡುವ ಸಂದರ್ಭದಲ್ಲಿ ಎಲ್ಲರೂ ಸಹಭಾಗಿತ್ವ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಸಿಗಳನ್ನು ವಿದ್ಯಾರ್ಥಿಗಳು ನೆಟ್ಟರು. ಶ್ರಮದಾನದ ಮಕ್ಕಳಿಗೆ ವಸತಿ ಗೃಹದ ನಿವಾಸಿಗಳು ಉಪಾಹಾರದ ವ್ಯವಸ್ಥೆ ಕಲ್ಪಿಸಿದ್ದರು. ಜಿಲ್ಲಾ ರೀಟೇಲರ್ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ 100 ಮಾಸ್ಕ್ ಮತ್ತು ಗ್ಲೌಸ್ಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಸಹಕರಿಸಿದರು.
ನಗರ ಸಂಚಾರಿ ಠಾಣೆಯ ಮಂಜುನಾಥ್ ಮತ್ತು ಶಾಂತಿಗ್ರಾಮ ಠಾಣೆಯ ಪ್ರವೀಣ್ ಭಾಗವಹಿಸಿದ್ದರು.