ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಲೂರು | 126 ಮರ ಕಡಿತ: ಪ್ರಕರಣ ದಾಖಲು

Published 24 ಡಿಸೆಂಬರ್ 2023, 16:41 IST
Last Updated 24 ಡಿಸೆಂಬರ್ 2023, 16:41 IST
ಅಕ್ಷರ ಗಾತ್ರ

ಬೇಲೂರು (ಹಾಸನ): ತಾಲ್ಲೂಕಿನ ನಂದಗೋಡನಹಳ್ಳಿಯ 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಬೇಲೂರು ಆರ್‌ಎಫ್‌ಒ ಅವರು ಜಮೀನಿನ ಮಾಲೀಕರಾದ ಜಯಮ್ಮ, ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಿದಿರುವ ಮರಗಳನ್ನು ಅರಣ್ಯ ಇಲಾಖೆಯ ಡಿಪೊದಲ್ಲಿ ಸಂಗ್ರಹಿಸಲಾಗಿದೆ.

‘ನಂದಗೋಡನಹಳ್ಳಿ‌ಯ ಸರ್ವೆ ನಂಬರ್ 16/ಪಿ2ಯಲ್ಲಿರುವ 3 ಎಕರೆ 10 ಗುಂಟೆ ಜಮೀನನ್ನು ಜಯಮ್ಮ, ಸಕಲೇಶಪುರ ತಾಲ್ಲೂಕಿನ ಬಿರಡಹಳ್ಳಿಯ ವಿಕ್ರಂ ಸಿಂಹ ಬಿ.ಜಿ. ಅವರಿಗೆ ಶುಂಠಿ ಬೆಳೆಯಲು ಕರಾರು ಪತ್ರ ಮಾಡಿಕೊಟ್ಟಿದ್ದಾರೆ. ಇದೇ ಸರ್ವೆ ನಂಬರ್‌ನ 10 ಎಕರೆ ಪ್ರದೇಶದಲ್ಲಿದ್ದ ಸಾಗವಾನಿ, ಹೊನ್ನೆ, ಬೀಟೆ, ಹಲಸು ಸೇರಿದಂತೆ ಇನ್ನಿತರ ಬೆಲೆ ಬಾಳುವ ಕಾಡು ಜಾತಿ ಮರಗಳನ್ನು ಕಡಿಯಲಾಗಿದೆ. ಇದು ಸರ್ಕಾರಿ ಗೋಮಾಳವಾಗಿದ್ದು, ಕರಾರು ಮಾಡಿಕೊಟ್ಟಿರುವ ಜಾಗವು ಇದರ ಪಕ್ಕದಲ್ಲಿದೆ’ ಎಂದು ಸ್ಥಳೀಯರು ಹೇಳಿದರು.

ಡಿ.17ರಂದು ಗ್ರಾಮಕ್ಕೆ ಭೇಟಿ ನೀಡಿದ್ದ ಬೇಲೂರು ತಹಶೀಲ್ದಾರ್‌ ಮಮತಾ ಅವರು, ಮರ ಕಡಿದಿರುವುದನ್ನು ಗಮನಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆರ್‌ಎಫ್‌ಒಗೆ ಸೂಚಿಸಿದ್ದರು.

‘ಇದು ಮೇಲ್ನೋಟಕ್ಕೆ ಸರ್ಕಾರಿ ಗೋಮಾಳವೆಂದು ಕಂಡು ಬರುತ್ತಿದೆ. ಸರ್ವೆ ನಡೆಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ತನಿಖೆ ನಡೆದಿದೆ’ ಎಂದು ಡಿಎಫ್‌ಒ ಮೋಹನ್‌ಕುಮಾರ್ ತಿಳಿಸಿದರು.

‘ಜಯಮ್ಮ ಅವರಿಗೆ ಮಂಜೂರಾಗಿರುವ 3 ಎಕರೆ 10 ಗುಂಟೆ ಜಮೀನು ಸೇರಿದಂತೆ ಸುತ್ತಲಿನ 12 ಎಕರೆ ಗೋಮಾಳ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಡಿಯಲಾಗಿದೆ. ಕಂದಾಯ ಇಲಾಖೆಯಿಂದ ಸರ್ವೆ ಮಾಡಲಾಗಿದೆ. ಜಯಮ್ಮ ಅವರ ಜಾಗದಲ್ಲಿನ ಮರ ಕಡಿದರೂ ಅದು ಕಾನೂನು ಬಾಹಿರವೇ. ಅನುಮತಿ ಇಲ್ಲದೇ ಮರಗಳನ್ನು ಕಡಿಯುವಂತಿಲ್ಲ. ತನಿಖೆ ನಡೆಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಎಂ.ಮಮತಾ ಸ್ಪಷ್ಟಪಡಿಸಿದ್ದಾರೆ.

ವಿಕ್ರಂ ಸಿಂಹ ವಿರುದ್ಧ ಕಾಂಗ್ರೆಸ್ ಆರೋಪ

‘ಸಂಸದ ಪ್ರತಾಪ ಸಿಂಹ ಸಹೋದರ ವಿಕ್ರಂ ಸಿಂಹ ಅವರೇ ಈ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದಾರೆ’ ಎಂದು ಕಾಂಗ್ರೆಸ್‌ ‘ಎಕ್ಸ್‌’ ಮಾಡಿ ಆರೋಪಿಸಿದೆ. ‘ಹಾಸನ ಜಿಲ್ಲೆಯಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದಿದ್ದಾರೆ. ಇದು ಕಾನೂನು ಉಲ್ಲಂಘನೆ. ವಿಕ್ರಂ ಸಿಂಹ ಎನ್ನುವವರು ಜಮೀನನ್ನು ಕರಾರು ಮಾಡಿಕೊಂಡಿದ್ದು ಈ ಮರಗಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಅವರು ಬಿಜೆಪಿ ಸಂಸದರ ಸಹೋದರರೋ ಅಥವಾ ಯಾರೆಂಬುದು ನನಗೆ ಗೊತ್ತಿಲ್ಲ. ತನಿಖೆ ನಡೆಯುತ್ತಿದ್ದು ಸತ್ಯಾಸತ್ಯತೆ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

2024ರ ಜ.1ರಿಂದ ಆ ಜಮೀನು ಲೀಸ್‌ಗೆ ಪಡೆದಿದ್ದೇನೆ. ಶುಂಠಿ ಕೃಷಿ ಮಾತ್ರ ನನಗೆ ಸಂಬಂಧ. ಮರ ಕಡಿದಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.
ವಿಕ್ರಂ ಸಿಂಹ, ಸಂಸದ ಪ್ರತಾಪ ಸಿಂಹ ಸಹೋದರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT